Home News ಅಗ್ನಿಶಾಮಕ ದಳದ ಕಛೇರಿ ಉದ್ಘಾಟನೆ

ಅಗ್ನಿಶಾಮಕ ದಳದ ಕಛೇರಿ ಉದ್ಘಾಟನೆ

0

ಮುಂದಿನ ಒಂದು ವರ್ಷದ ಒಳಗೆ ತಾಲ್ಲೂಕಿನಲ್ಲಿ ಸುಸಜ್ಜಿತ ಅಗ್ನಿಶಾಮಕ ಠಾಣೆ ಸೇರಿದಂತೆ ಸಿಬ್ಬಂದಿಗೆ ಉತ್ತಮ ವಸತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಮಿನಿ ವಿಧಾನಸೌಧ ಬಳಿಯಿರುವ ಹಳೆಯ ನ್ಯಾಯಾಲಯ ಕಟ್ಟಡಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಅಗ್ನಿಶಾಮಕ ದಳದ ಕಛೇರಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಅಗ್ನಿಶಾಮಕ ಠಾಣೆ ನಿರ್ಮಿಸಲು ಮಾಜಿ ಶಾಸಕ ದಿವಂಗತ ಎಸ್.ಮುನಿಶಾಮಪ್ಪನವರ ಕಾಲದಲ್ಲಿ ತಾಲ್ಲೂಕಿನ ಆನೂರು ಗ್ರಾಮದ ಬಳಿ ಒಂದು ಎಕರೆ ಜಾಗ ಮೀಸಲಿಟ್ಟಿತ್ತು. ನಂತರ ಬಂದಂತಹ ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲವಾದ್ದರಿಂದ ಅಗ್ನಿಶಾಮಕ ಠಾಣೆ ನಿರ್ಮಾಣವಾಗಿರಲಿಲ್ಲ.
ತಾವು ಶಾಸಕರಾದ ನಂತರ ತಾಲ್ಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸಲೇ ಬೇಕು ಎಂಬ ಹಠದಿಂದ ಪ್ರಯತ್ನ ನಡೆಸಿ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಕಾರ್ಯ ಪ್ರಾರಂಭಿಸಲಾಗಿದೆ. ಸರ್ಕಾರ ೭ ಕೋಟಿ ರೂ ಅನುದಾನ ಬಿಡುಗಡೆಗೊಳಿಸಿದ್ದು ಶೀಘ್ರ ಟೆಂಡರ್ ಪ್ರಕ್ರಿಯೆ ಕಾರ್ಯ ಮುಗಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ತಾಲ್ಲೂಕಿನಾದ್ಯಂತ ಯಾವುದೇ ಅವಘಡ ಸಂಭವಿಸಿದರೂ ನೆರೆಯ ಚಿಕ್ಕಬಳ್ಳಾಪುರ ಅಥವಾ ಚಿಂತಾಮಣಿಯಿಂದ ಅಗ್ನಿಶಾಮಕ ವಾಹನಗಳು ಬರಬೇಕಾಗಿತ್ತು. ಸ್ಥಳಕ್ಕೆ ವಾಹನ ಬರುವ ಹೊತ್ತಿಗೆ ಬಹುತೇಕ ಆಸ್ತಿ ಪಾಸ್ತಿ ನಷ್ಟವುಂಟಾಗುತ್ತಿತ್ತು. ಇದೀಗ ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ತಾತ್ಕಾಲಿಕವಾಗಿ ಅಗ್ನಿಶಾಮಕ ಠಾಣೆ ಸ್ಥಾಪಿಸಿದ್ದು ಇದು ತೊಂದರೆಗೊಳಗಾದವರಿಗೆ ನೆರವಾಗಲಿದೆ ಎಂದರು.
ಅಗ್ನಿಶಾಮಕ ಹಾಗು ತುರ್ತು ಸೇವೆಗಳ ಸಬ್ ಇನ್ಸ್ಪೆಕ್ಟರ್ ಎಚ್.ಎಸ್.ರೇವಣ್ಣ ಮಾತನಾಡಿ, ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿಯೂ ಅಗ್ನಿಶಾಮಕ ದಳ ಸ್ಥಾಪಿಸಲು ಸರ್ಕಾರ ಮುಂದಾಗಿದ್ದು ಇದುವರೆಗೂ ಶೇ. ೯೮ ರಷ್ಟು ಅಗ್ನಿಶಾಮಕ ಠಾಣೆಗಳು ಪೂರ್ಣಗೊಂಡಿವೆ ಎಂದು ನುಡಿದರು.
ಇದೀಗ ತಾಲ್ಲೂಕಿನಲ್ಲಿ ತಾತ್ಕಾಲಿಕವಾಗಿ ಅಗ್ನಿಶಾಮಕ ಠಾಣೆ ನಿರ್ಮಿಸಲಾಗಿದ್ದು ಶಾಶ್ವತ ಕಟ್ಟಡ ನಿರ್ಮಾಣ ಮಾಡಲು ಸರ್ಕಾರದಿಂದ ಈಗಾಗಲೇ ಅನುಮೋದನೆ ದೊರೆತಿದ್ದು ಮುಂದಿನ ದಿನಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಣ ಮಾಡಲಾಗುವುದು. ತಾಲ್ಲೂಕಿನಲ್ಲಿ ನಿರ್ಮಾಣವಾಗಲಿರುವ ಅಗ್ನಿಶಾಮಕ ಠಾಣೆ ರಾಜ್ಯದ ೨೦೨ ನೇ ಅಗ್ನಿಶಾಮಕ ಠಾಣೆಯಾಗಿದ್ದು ಒಂದು ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗುವ ಈ ಕಟ್ಟಡ ಅತಿ ಸುಂದರವಾಗಿ ಮೂಡಿ ಬರಲಿದೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ತನುಜಾರಘು, ಎ.ಎಂ.ಜಯರಾಮರೆಡ್ಡಿ, ಬೆಂಗಳೂರು ಪಶ್ಚಿಮ ಪ್ರಾಂತ್ಯದ ಮುಖ್ಯಅಗ್ನಿಶಾಮಕ ಅಧಿಕಾರಿ ಕೆ.ಶಿವಕುಮಾರ್, ಬೆಂಗಳೂರು ಉತ್ತರ ವಲಯ ಬಿ.ಎನ್.ಮಂಜುನಾಥ್. ತಾಲ್ಲೂಕು ಪಂಚಾಯತಿ ಇಓ ವೆಂಕಟೇಶ್, ನಗರಸಭೆ ಆಯುಕ್ತ ಎಚ್.ಎ.ಹರೀಶ್, ಉಪತಹಶೀಲ್ದಾರ್ ವಾಸುದೇವಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!