ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಬಾಲಕ ಆರು ವರ್ಷದ ಸಾತ್ವಿಕ್ ಗೆ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2019-20 ನೇ ಸಾಲಿನ “ಹೊಯ್ಸಳ ಶೌರ್ಯ” ಪ್ರಶಸ್ತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಸಚಿವೆ ಶಶಿಕಲಾ ಅ ಜೊಲ್ಲೆ ಪ್ರದಾನ ಮಾಡಿದರು.
ಅಪ್ಪೇಗೌಡನಹಳ್ಳಿಯ ವಿಜಯಕುಮಾರ್ ಮತ್ತು ಮಂಜುಳ ದಂಪತಿಯ ಮಗನಾದ ಸಾತ್ವಿಕ್, ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಳಿಯಿರುವ ನೀರಿನ ತೊಟ್ಟಿಗೆ ಆಯತಪ್ಪಿ ಬಿದ್ದ ಪೂರ್ವಿಕ ಎಂಬ ಬಾಲಕಿಯನ್ನು ರಕ್ಷಿಸಿದ್ದ. ತೊಟ್ಟಿಯಲ್ಲಿ ಬಿದ್ದ ಬಾಲಕಿಯನ್ನು ಕಂಡೊಡನೆ ಭಯಪಡದೆ, ಆ ಮಗುವಿನ ಕೈ ನೀರಿನಿಂದ ಮೇಲೆ ಬಂದ ತಕ್ಷಣ ಬುದ್ಧಿ ಉಪಯೋಗಿಸಿ ಕೈ ಹಿಡಿದು ನೀರಿನಿಂದ ಮೇಲೆತ್ತಿ ಪ್ರಾಣಾಪಾಯದಿಂದ ರಕ್ಷಿಸಿ, ಧೈರ್ಯ ಸಾಹಸ ಪ್ರದರ್ಶಿಸಿದ್ದ. ಈ ಘಟನೆ ನಡೆದದ್ದು 2018 ರ ಜುಲೈ 25 ರಂದು. ಸಾತ್ವಿಕ್ ನ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಮೆಚ್ಚಿ ಸರ್ಕಾರ “ಹೊಯ್ಸಳ ಶೌರ್ಯ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಶಂಸಾ ಪತ್ರ, ನೆನಪಿನ ಕಾಣಿಕೆ ಹಾಗೂ ಹತ್ತು ಸಾವಿರ ರೂಗಳ ಚೆಕ್ ನೀಡಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ್ ಹಾಜರಿದ್ದರು.