ಉತ್ತಮ ಗುಣಮಟ್ಟದ ಕ್ರೀಡಾಂಗಣವಾಗಿ ರೂಪಿಸಲು ಉದ್ದೇಶಿಸಿದ್ದ ನಗರದ ನೆಹರೂ ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗಿದ್ದು, ಕ್ರೀಡೆಗಳು ನಡೆಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಕ್ರೀಡಾಪಟುಗಳು ಒತ್ತಾಯಿಸಿದ್ದಾರೆ.
ಕ್ರೀಡಾಂಗಣದ ಕಚೇರಿಯಲ್ಲಿ ಹಾವಿನ ಪೊರೆಗಳು ಕಂಡು ಬಂದಿದ್ದು ಕ್ರೀಡಾಂಗಣದ ಕಾವಲುಗಾರರು ಕಚೇರಿಗೆ ಹೋಗಲು ಹೆದರುವಂತಾಗಿದೆ. ಟ್ರಾಕ್ ಮೇಲೆ ಹುತ್ತಗಳು ಮೊಳೆತಿವೆ. ಕ್ರೀಡಾಂಗಣದ ಟ್ರಾಕ್ ಅಕ್ಕ ಪಕ್ಕ, ಪೆವಿಲಿಯನ್ ಸುತ್ತಮುತ್ತ, ಬ್ಯಾಸ್ಕೆಟ್ ಬಾಲ್ ಕೋರ್ಟ್ ಸುತ್ತ ಪಾರ್ಥೇನಿಯಂ ಮತ್ತು ಕಳೆಗಿಡಗಳು ಮೂಡಿವೆ. ಜೂಜುಕೋರರ ಅವ್ಯವಹಾರದ ತಾಣವಾಗಿ ಕ್ರೀಡಾಂಗಣ ಬದಲಾಗಿದೆ.
ಕ್ರೀಡಾಂಗಣದ ಪ್ರವೇಶದ್ವಾರದಲ್ಲಿರುವ ಕಬ್ಬಣದ ಗೇಟನ್ನು ದುಷ್ಕರ್ಮಿಗಳು ಮುರಿದುಹಾಕಿದ್ದು, ರಾತ್ರಯ ವೇಳೆಯಲ್ಲಿ ಪೆವಿಲಿಯನ್ ಮೇಲಿನ ಕಲ್ಲುಚಪ್ಪಡಿಗಳನ್ನು ಹಾಗೂ ಲಾಂಗ್ ಜಂಪ್ ಪಿಟ್ನಲ್ಲಿರುವ ಮರಳನ್ನು ಕದ್ದು ಸಾಗಿಸಿದ್ದಾರೆ. ಇಲ್ಲಿನ ಎರಡು ಕಚೇರಿಗಳಂತೂ ಗೋಡೆಯೆಲ್ಲಾ ಬೂಜು ಕಟ್ಟಿದ್ದು, ಮಳೆ ನೀರು ಸೋರುತ್ತಿರುತ್ತದೆ. ಕ್ರೀಡೆಗೆ ಉತ್ತೇಜನ ನೀಡಲು ಹಲವಾರು ಯೋಜನೆಗಳನ್ನು ರೂಪಿಸಿರುವುದಾಗಿ ಜನಪ್ರತಿನಿಧಿಗಳು ಹೇಳಿದ್ದರು. ಆದರೆ ಇಲ್ಲಿ ಯಾವ ಕಾಮಗಾರಿಗಳೂ ನಡೆಯದೇ ಅವ್ಯವಹಾರಗಳ ತಾಣವಾಗಿದೆ ಎಂದು ಕ್ರೀಡಾಪಟುಗಳು ದೂರಿದ್ದಾರೆ.
‘ಡಿಸೆಂಬರ್ 4 ರಿಂದ ಸರ್ಕಾರಿ ನೌಕರರ ಕ್ರೀಡಾಕೂಟ ಪ್ರಾರಂಭವಾಗಲಿದೆ. ಕ್ರೀಡಾಂಗಣದಲ್ಲಿ ಸೂಕ್ತ ಭದ್ರತೆಯಿಲ್ಲದ ಕಾರಣ ಇರುವ ಎಲ್ಲಾ ಅನುಕೂಲಗಳೂ ಕ್ರೀಡಾಪಟುಗಳಿಗೆ ಲಭ್ಯವಾಗದಂತಾಗಿದೆ. ರಾತ್ರಿ ವೇಳೆ ಕಾವಲು ಇರದ ಕಾರಣ ಕಳ್ಳತನಗಳು ನಡೆಯುತ್ತಿವೆ. ಹಾವಿನ ಕಾಟದಿಂದಾಗಿ ಕಚೇರಿಯೊಳಗೆ ಹೋಗಲು ಭಯವಾಗುತ್ತದೆ’ ಎನ್ನುತ್ತಾರೆ ಹಗಲುಪಾಳಿಯ ಕಾವಲುಗಾರ ಶ್ರೀನಿವಾಸ್.