ತಾಲ್ಲೂಕಿನ ಮುತ್ತೂರು ಗ್ರಾಮದ ಮಂಜುನಾಥ್ ಅವರ ಕುರಿ ಐದು ಮರಿಗಳನ್ನು ಹಾಕುವ ಮೂಲಕ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ಹೆಚ್ಚೆಂದರೆ ೨ ರಿಂದ ೩ ಮರಿ ಹಾಕುವುದನ್ನು ಕಂಡಿದ್ದ ಕುರಿ ಸಾಕಣೆದಾರರು ಇದನ್ನು ಕಂಡು ಅಚ್ಚರಿ, ಮೆಚ್ಚುಗೆ ಹಾಗೂ ಕುತೂಹಲ ವ್ಯಕ್ತಪಡಿಸಿದ್ದಾರೆ.
“ಇದು ಮಹಾರಾಷ್ಟ್ರ ಮೂಲದ ನಾರಿ ಸುವರ್ಣ ಎಂಬ ತಳಿಯ ಕುರಿ. ಕಳೆದ ಬಾರಿ ಮೂರು ಮರಿಗಳನ್ನು ಹಾಕಿತ್ತು. ಆದರೆ ಈ ಬಾರಿ ಐದು ಮರಿಗಳನ್ನು ಹಾಕಿದೆ. ಅವುಗಳಲ್ಲಿ ಎರಡು ಗಂಡು ಮತ್ತು ಮೂರು ಹೆಣ್ಣು ಮರಿಗಳಿದ್ದು, ಎಲ್ಲವೂ ಆರೋಗ್ಯವಾಗಿವೆ” ಎಂದು ಮುತ್ತೂರು ಮಂಜುನಾಥ್ ತಿಳಿಸಿದರು.
“೨೦೧೪ ರಲ್ಲಿ ಟಿ.ಬಿ.ಜಯಚಂದ್ರ ಅವರು ಪಶು ಸಂಗೋಪನಾ ಸಚಿವರಾಗಿದ್ದಾಗ ರಾಜ್ಯಕ್ಕೆ ಮಹಾರಾಷ್ಟ್ರದಿಂದ ಆರು ನಾರಿ ಸುವರ್ಣ ತಳಿಯ ಗಂಡು ಮರಿಗಳನ್ನು ತರಿಸಿದ್ದರು. ಅದರಲ್ಲಿ ಒಂದನ್ನು ೫೨ ಸಾವಿರ ರೂ ಕೊಟ್ಟು ಕೊಂಡೆ. ಅದರಿಂದ ತಳಿ ಅಭಿವೃದ್ಧಿ ಮಾಡಿದೆ. ಹೀಗೆ ನಮ್ಮಲ್ಲಿ ಹುಟ್ಟಿದ ನಾರಿ ಸುವರ್ಣ ತಳಿಯ ಕುರಿ ಐದು ಮರಿಗಳನ್ನು ಹಾಕಿದೆ. ನಮ್ಮ ಬಳಿ ಈ ತಳಿಯ ೮ ಹೆಣ್ಣು ಮತ್ತು ೨ ಗಂಡು ಕುರಿಗಳಿವೆ. ಎರಡು ತಿಂಗಳು ಆಗುವಷ್ಟರಲ್ಲಿ ಹಾಲು ಕುಡಿಯುವುದನ್ನು ಮರಿ ನಿಲ್ಲಿಸುತ್ತದೆ. ಆಗಲೇ ಅದನ್ನು ಕೊಳ್ಳುವವರು ಬಂದು ತೆಗೆದುಕೊಂಡು ಹೋಗುತ್ತಾರೆ. ಸುಮಾರು ೧೨ ಸಾವಿರಕ್ಕೆ ಒಂದು ಮರಿ ಮಾರಾಟವಾಗುತ್ತದೆ” ಎಂದು ಅವರು ವಿವರಿಸಿದರು.