Home News ಕಸದ ತೊಟ್ಟಿಗೆ ಸೇರಿದ ಮಕ್ಕಳ ಆರೋಗ್ಯ ಸುಧಾರಿಸುವ ಯೋಜನೆ

ಕಸದ ತೊಟ್ಟಿಗೆ ಸೇರಿದ ಮಕ್ಕಳ ಆರೋಗ್ಯ ಸುಧಾರಿಸುವ ಯೋಜನೆ

0

ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆಯನ್ನು ನಿವಾರಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಬ್ಬಿಣಾಂಶದ ಮತ್ತು ವಿಟಮಿನ್ ಎ ಮಾತ್ರೆಗಳನ್ನು ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತಿದೆ. ಆದರೆ, ಶಿಡ್ಲಘಟ್ಟದ ಬಿ.ಆರ್.ಸಿ ಕೇಂದ್ರದ ಹಿಂಭಾಗದಲ್ಲಿರುವ ಕಸದ ಗುಂಡಿಯಲ್ಲಿ ರಾಶಿಯಾಗಿ ಬಿದ್ದಿರುವ ಈ ಮಾತ್ರೆಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳ ಅಸಮರ್ಪಕ ವಿತರಣೆಗೆ ಸಾಕ್ಷಿಯಾಗಿವೆ.
ಸ್ಥಳೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಯೋಜನೆ ಮತ್ತು ಲಕ್ಷಾಂತರ ರೂ ಹಣ ವ್ಯರ್ಥವಾಗಿವೆ. ಸರಬರಾಜು ಮಾಡಿರುವ ಮಾತ್ರೆಗಳು ಬೀದಿಗೆ ಬಿದ್ದಿವೆ.
ತಾಲ್ಲೂಕಿನಾದ್ಯಂತ ಸುಮಾರು ೨೭೦ ಸರ್ಕಾರಿ ಹಾಗು ೭೪ ಅನುದಾನಿತ ಶಾಲೆಗಳಿದ್ದು ಅಂದಾಜು ೩೦ ಸಾವಿರ ವಿದ್ಯಾರ್ಥಿಗಳು ಪ್ರಾಥಮಿಕ ಹಾಗು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಸರ್ಕಾರ ವಾರಕ್ಕೆ ಮೂರು ಬಾರಿಯಂತೆ ೩೬ ವಾರಗಳ ಕಾಲ ಕಬ್ಬಿಣಾಂಶದ ಮಾತ್ರೆ ಹಾಗೂ ವರ್ಷಕ್ಕೆರಡು ಭಾರಿ ವಿಟಮಿನ್ ಎ ಮತ್ತು ವರ್ಷಕ್ಕೆ ಎರಡು ಭಾರಿ ಆಲ್ಬೆಂಡಾಜೋಲ್ ಮಾತ್ರೆ ವಿತರಿಸಲು ಅಕ್ಷರದಾಸೋಹದ ಮೂಲಕ ಶಿಕ್ಷಣ ಇಲಾಖೆಗೆ ರವಾನಿಸಲಾಗಿದೆ.
ಆದರೆ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಬಿ ಆರ್ ಸಿ, ಸಿ ಆರ್ ಪಿ ಹಾಗು ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಸರ್ಕಾರದಿಂದ ಸರಬರಾಜಾಗಿರುವ ಕಬ್ಬಿಣಾಂಶದ ಮಾತ್ರೆಗಳು ಮತ್ತು ವಿಟಮಿನ್ ಎ ಮಾತ್ರೆಗಳನ್ನು ಯಾವುದೇ ಶಾಲೆಗೆ ನೀಡದೇ ಇಟ್ಟ ಸ್ಥಳದಲ್ಲಿಯೇ ಮಾತ್ರೆಗಳ ಅವಧಿ ಮುಗಿದಿದೆ. ಇದೀಗ ಅವಧಿ ಮುಗಿದ ಮಾತ್ರೆಗಳನ್ನು ನಗರದ ಬಿಆರ್ಸಿ ಕೇಂದ್ರದ ಹಿಂಭಾಗದಲ್ಲಿರುವ ಕಸದ ಗುಂಡಿಯಲ್ಲಿ ಬಿಸಾಕುವ ಮೂಲಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳ ಆರೋಗ್ಯ ಮತ್ತು ಸರ್ಕಾರದ ಮಹತ್ತರ ಯೋಜನೆಯೊಂದನ್ನು ಹಾಳುಮಾಡಿದ್ದಾರೆ.
‘ಮಕ್ಕಳಲ್ಲಿ ರಕ್ತಹೀನತೆ ಕಾಡಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಆರೋಗ್ಯ ಇಲಾಖೆಯ ಎನ್ಆರ್ಎಚ್ಎಂ ಯೋಜನೆಯಿಂದ ಮಕ್ಕಳಿಗೆ ಉಚಿತವಾಗಿ ಮಾತ್ರೆಗಳನ್ನು ವಿತರಿಸುತ್ತಿದೆ. ಆದರೆ ಸ್ಥಳೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಯಾವುದೇ ಶಾಲೆಗೂ ಮಾತ್ರೆಗಳನ್ನು ವಿತರಿಸದೇ ಕಸದ ಗುಂಡಿಗೆ ಹಾಕಿರುವ ಕ್ರಮದ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕ್ರಮ ಜರುಗಿಸಬೇಕು’ ಎನ್ನುತ್ತಾರೆ ಸಾರ್ವಜನಿಕರು.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವಿಚಾರಿಸಿದಾಗ, ‘ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಕೇವಲ ಎರಡೂವರೆ ತಿಂಗಳಾಗಿದೆ. ಅವಧಿ ಮುಗಿದ ಮಾತ್ರೆ ಕಸದ ತೊಟ್ಟಿಗೆ ಹಾಕಿರುವ ಸ್ಥಳಕ್ಕೆ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಬಿಸಾಕಿರುವ ಮಾತ್ರೆಗಳೆಲ್ಲವೂ ತುಂಬಾ ಹಳೆಯದ್ದಾಗಿದ್ದು ಈ ಹಿಂದಿನ ಅಧಿಕಾರಿಗಳು ಈ ಮಾತ್ರೆಗಳನ್ನು ಸಮರ್ಪಕವಾಗಿ ಉಪಯೋಗಿಸಲು ಅಧಿಕಾರಿಗಳಿಗೆ ಸೂಚಿಸಬೇಕಿತ್ತು. ಆದರೆ ಸಾಕಷ್ಟು ಮಾತ್ರೆಗಳು ಅವಧಿ ಮುಗಿಯುವವರೆಗೂ ಕಚೇರಿಯಲ್ಲಿಟ್ಟುಕೊಂಡು ಇದೀಗ ರಸ್ತೆಗೆ ಹಾಕಿರುವ ಕ್ರಮ ಸರಿಯಲ್ಲ’ ಎಂದು ಹೇಳಿದರು.
 

error: Content is protected !!