ನಗರದ ಒಂಭತ್ತನೇ ವಾರ್ಡಿನಲ್ಲಿ ಕುಡಿಯುವ ನೀರಿದ್ದರೂ ಜನರು ಕುಡಿಯಲು ಅಸಾಧ್ಯವಾಗಿದೆ. ಏಕೆಂದರೆ ಚರಂಡಿ ತುಂಬಿ ತುಳುಕುತ್ತಿದ್ದು, ಕುಡಿಯುವ ನೀರಿಗೆ ಚರಂಡಿಯ ತ್ಯಾಜ್ಯದ ನೀರೆಲ್ಲಾ ಸೋರಿಕೆಯಾಗುತ್ತಿದೆ ಎಂದು ಈ ಭಾಗದ ಜನರು ದೂರಿದ್ದಾರೆ.
ಸುಮಾರು ನಾಲ್ಕು ಅಡಿ ಆಳದ ಚರಂಡಿಯು ತ್ಯಾಜ್ಯದಿಂದ ತುಂಬಿ ತುಳುಕುತ್ತಿದೆ. ನೀರು ಹೊರಗೆ ಹೋಗದೆ ಅಲ್ಲಿಯೇ ನಿಂತ ಕಾರಣ ಕಲುಷಿತ ವಾತಾವರಣವನ್ನು ಸೃಷ್ಟಿಸಿದೆ. ಸೊಳ್ಳೆಗಳ ಆವಾಸಸ್ಥಾನವಾಗಿದೆ. ಕೇವಲ ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಈ ಫಲೇಚರ್ ಕ್ವಾಟರ್ಸಿನಲ್ಲಿ ಅನೈರ್ಮಲ್ಯದ ಕಾರಣ ಖಾಯಿಲೆ ಪೀಡಿತರು ಹೆಚ್ಚಾಗುತ್ತಿದ್ದಾರೆ.
ಚರಂಡಿಯು ಸಂಪೂರ್ಣವಾಗಿ ತ್ಯಾಜ್ಯದಿಂದ ತುಂಬಿ ಹೋಗಿ ಕುಡಿಯುವ ನೀರು ಹರಿಯುವ ಕೊಳಾಯಿಯಲ್ಲಿಯೂ ಸಂಪೂರ್ಣ ತ್ಯಾಜ್ಯದ ನೀರು ತುಂಬಿದೆ. ಹೀಗಾಗಿ ತ್ಯಾಜ್ಯದ ಕೆಟ್ಟ ವಾಸನೆಯಿರುವ ನೀರನ್ನು ಕುಡಿಯುವ ಪರಿಸ್ಥಿತಿ ಈ ಭಾಗದ ಜನರದ್ದು.
ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ದೂರಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಊರಿನ ಬೇರೆಲ್ಲಾ ಕಡೆ ಒಳಚರಂಡಿ ವ್ಯವಸ್ಥೆಯಿದ್ದರೂ, ಈ ಭಾಗದಲ್ಲಿ ಮಾತ್ರವಿಲ್ಲ. ಸ್ವಚ್ಛಭಾರತ್ ಹೆಸರಿನಲ್ಲಿ ಲಕ್ಷಾಂತರ ಹಣವನ್ನು ನಗರಸಭೆಯವರು ಖರ್ಚು ಮಾಡುತ್ತಿದ್ದಾರೆ. ಆದರೆ ಈ ಭಾಗದಲ್ಲಿ ಮಾತ್ರ ಚರಂಡಿಯನ್ನೂ ಶುಚಿಗೊಳಿಸದೆ, ತ್ಯಾಜ್ಯವನ್ನು ತೆಗೆಯುತ್ತಿಲ್ಲ. ಕೂಲಿ ಮಾಡಿ ಜೀವಿಸುವ ಜನರು ಆಸ್ಪತ್ರೆ ಖರ್ಚಿಗೆ ಹಣ ವ್ಯಯಿಸಲಾಗದೆ ಕಷ್ಟಪಡುವಂತಾಗಿದೆ. ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಎಂದು ಜನರು ದೂರಿದ್ದಾರೆ.