ಒಂದೆಡೆ ಗ್ರಾಮದಲ್ಲಿ ಅನೈರ್ಮಲ್ಯ ಹೆಚ್ಚಾಗಿದ್ದರೆ, ಮತ್ತೊಂದೆಡೆ ರಸ್ತೆ ಒತ್ತುವರಿ ಕಾರ್ಯ ನಡೆದಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಾಲ್ಲೂಕಿನ ಕೊತ್ತನೂರಿನ ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದಲ್ಲಿ ದುಬಾರಿ ವೆಚ್ಚದಲ್ಲಿ ಸಾರ್ವಜನಿಕರ ಅನುಕೂಲಕ್ಕೆಂದು ನಿರ್ಮಿಸಲಾಗಿರುವ ರಸ್ತೆ ಹಾಗೂ ಚರಂಡಿಗಳನ್ನು ದುರುಪಯೋಗ ಪಡಿಸಿಕೊಂಡು ಒತ್ತುವರಿ ಮಾಡಲಾಗಿದೆ. ರಸ್ತೆಗಳಲ್ಲಿ ಕಸ, ಮಣ್ಣಿನ ರಾಶಿ ಸುರಿಯಲಾಗಿದೆ. ಚರಂಡಿ ಮೇಲೆ ಅನಧಿಕೃತ ನಿರ್ಮಾಣಗಳು, ರಸ್ತೆಗಳಲ್ಲಿ ಸಿಮೆಂಟ್ ಹಾಕಿದ್ದರೂ ಕಿತ್ತುಹಾಕಿ ಗಿಡಗಳನ್ನು ನೆಟ್ಟಿರುವುದು ತೆರವುಗೊಳಿಸಬೇಕು. ಚರಂಡಿಗಳು ತ್ಯಾಜ್ಯದಿಂದ ತುಂಬಿ ತುಳುಕುತ್ತಾ ಅನಾರೋಗ್ಯ ಹೆಚ್ಚುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾಧಿಕಾರಿಗಳಿಗೂ ಲಿಖಿತ ದೂರು ನೀಡಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಕ.ರ.ವೇ ಸಂಚಾಲಕ ನಾರಾಯಣಪ್ಪ ದೂರಿದರು.