ಹಿಂದು ಮುಸ್ಲಿಂ ಭಾವೈಕ್ಯದ ಸಂಕೇತವಾದ ದರ್ಗಾದಲ್ಲಿ ಜಾತಿ ಬೇಧ ಮರೆತು ಗಂಧದ ಅಭಿಷೇಕವನ್ನು ನಡೆಸುತ್ತಿರುವುದು ಮಾದರಿಯಾಗಿದೆ ಎಂದು ತಹಶೀಲ್ದಾರ್ ಕೆ.ಎಂ.ಮನೋರಮಾ ತಿಳಿಸಿದರು.
ನಗರದ ಗಾರ್ಡನ್ ರಸ್ತೆಯಲ್ಲಿರುವ ಹಜರತ್ ಸಯ್ಯದ್ ಹುಸೇನಿ ಸರ್ಮಸ್ತ್ ಷಾ ವಲೀ ದರ್ಗಾದಲ್ಲಿ ಶನಿವಾರ ರಾತ್ರಿ ನಡೆಸಿದ ಗಂಧದ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಂತಿ, ನೆಮ್ಮದಿ, ಮಳೆ, ಬೆಳೆ ಉತ್ತಮವಾಗಲಿ, ಸರ್ವರಿಗೂ ಒಳ್ಳೆಯದಾಗಲೆಂಬ ಆಶಯದಿಂದ ಪ್ರತಿವರ್ಷವೂ ದರ್ಗಾದಲ್ಲಿ ಗಂಧದ ಅಭಿಷೇಕ ಹಾಗೂ ಉತ್ಸವ ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ಜಾತಿ ಬೇಧವಿಲ್ಲದೆ ದರ್ಗಾಗೆ ಬಂದು ಜನರು ಆಶೀರ್ವಾದ ಪಡೆಯುವುದು ರೂಢಿ. ಸರ್ವಧರ್ಮ ಶಾಂತಿಯ ದ್ಯೋತಕವಾದ ಈ ಆಚರಣೆಯಲ್ಲಿ ಭಾಗವಹಿಸಿದವರಿಗೆ ಶುಭವಾಗಲಿ ಎಂದು ಹೇಳಿದರು.
ವಾದ್ಯವೃಂದದೊಂದಿಗೆ ಬಣ್ಣಬಣ್ಣದ ದೀಪಗಳಿಂದ ಹೂಗಳಿಂದ ಅಲಂಕೃತಗೊಂಡ ದೇವಸ್ಥಾನ, ಮಸೀದಿಗಳ ಪ್ರತಿಕೃತಿಗಳ ಮೆರವಣಿಗೆಯನ್ನು ಮಾಡಲಾಯಿತು.
ದರ್ಗಾದಲ್ಲಿ ಆಗಮಿಸಿದ ಗಣ್ಯರು ಹೂವು ಮತ್ತು ಛಾದರ್ ಹೊದಿಸಿ ಪ್ರಾರ್ಥನೆ ಸಲ್ಲಿಸಿದರು.