ಅತ್ಯಂತ ಪ್ರತಿಕೂಲ ಸನ್ನಿವೇಶದಲ್ಲೂ ತಮ್ಮ ಪ್ರಾಣದ ಹಂಗು ತೊರೆದು ದೇಶದ ಗಡಿ ಕಾಯುವ ಯೋಧರು ನಮ್ಮ ದೇಶದ ಅಮೂಲ್ಯ ಆಸ್ತಿ ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹುತಾತ್ಮ ಯೋಧ ಯಣ್ಣಂಗೂರಿನ ಗಂಗಾಧರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಊರು, ಮನೆ, ತಂದೆ-ತಾಯಿ, ಸಹೋದರ, ಸಹೋದರಿಯರು, ಪತ್ನಿ, ಗೆಳೆಯರ ಸಂಬಂಧಗಳನ್ನು ಕಳಚಿಕೊಂಡು ಮಳೆ, ಚಳಿ, ಗಾಳಿ, ಬಿಸಿಲು ಎನ್ನದೇ ದೇಶದ ಗಡಿ ಕಾಯುವ ಯೋಧರ ಸೇವೆ ಬಲು ದೊಡ್ಡದು. ಜೀವನ ನಿರ್ವಹಣೆಗಾಗಿ ಹಲವು ಹುದ್ದೆಗಳನ್ನು ನಿರ್ವಹಿಸುವವರು ನಮ್ಮ ನಡುವೆಯೇ ಇದ್ದಾರೆ. ಆದರೆ, ಯೋಧರ ಕರ್ತವ್ಯ ಮಾತ್ರ ಇದೆಲ್ಲವನ್ನೂ ಮೀರಿದ ಸಂಗತಿಯಾಗಿದೆ. ನಮ್ಮ ನೆಮ್ಮದಿಯ ಬದುಕಿಗೆ ಅವರು ತಮ್ಮ ಪ್ರಾಣವನ್ನು ಪಣವಾಗಿಟ್ಟಿರುತ್ತಾರೆ. ದೇಶಕ್ಕಾಗಿ ವೀರ ಮರಣವನ್ನಪ್ಪಿರುವ ಯಣ್ಣಂಗೂರಿನ ಗಂಗಾಧರ್ ಅವರು ಚಿರಸ್ಮರಣೀಯರು ಎಂದು ಹೇಳಿದರು.
ಗ್ರಾಮ ಪಂಚಾಯ್ತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ಯಣ್ಣಂಗೂರಿನ ಗಂಗಾಧರ್ ಅವರಿಂದ ಪ್ರೇರಣೆ ಪಡೆದು ಅವರ ತಮ್ಮ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಸೇನೆಗೆ ಸೇರುವ ಗುರಿಯನ್ನು ಹೊಂದಬೇಕು. ಯೋಧರು ಹಾಗೂ ಅವರ ಕುಟುಂಬದವರಿಗೆ ಆತ್ಮಸ್ಥೈರ್ಯ ದೊರಕಿಸುವ ಕೆಲಸ ಮಾಡಿದರೆ ಅವರಿಂದ ಮತ್ತಷ್ಟು ಉತ್ತಮ ಸೇವೆ ದೇಶಕ್ಕೆ ದೊರಕುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುತಾತ್ಮ ಯೋಧ ಗಂಗಾಧರ್ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲೆಂದು ಆಗಮಿಸಿದ್ದ ಯಾದಗಿರಿ ಜಿಲ್ಲೆಯಿಂದ ಈಶ್ವರ್ ಅವರ ದೇಶಪ್ರೇಮವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಶಾಲೆಯ ವತಿಯಿಂದ ಈಶ್ವರ್ ಅವರನ್ನು ಗೌರವಿಸಲಾಯಿತು.
ಶಾಲೆಯ ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕರಾದ ಎಸ್.ಚಾಂದ್ಪಾಷ, ಎಂ.ಅಶೋಕ್, ಎಂ.ಭಾರತಿ, ಮುಖಂಡರಾದ ಲಕ್ಷ್ಮೀನಾರಾಯಣ್, ಆನಂದಮೂರ್ತಿ, ನರಸಿಂಹಮೂರ್ತಿ, ದಾಸಪ್ಪ ಹಾಜರಿದ್ದರು.