Home News ಗ್ರಾಮಗಳ ಅಭಿವೃದ್ಧಿ ಆಗದ ಹೊರತು ದೇಶದ ಅಭಿವೃದ್ಧಿ ಆಗದು

ಗ್ರಾಮಗಳ ಅಭಿವೃದ್ಧಿ ಆಗದ ಹೊರತು ದೇಶದ ಅಭಿವೃದ್ಧಿ ಆಗದು

0

ಗ್ರಾಮೀಣ ಭಾಗದ ಜನರ ಬದುಕು ಸುಧಾರಣೆ ಆಗದ ಹೊರತು ನಾಡಿನ ಅಭಿವೃದ್ಧಿ ಅಸಾಧ್ಯ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಪಲಿಚೇರ್ಲು ಗ್ರಾಮದ ನಿರ್ಮಾಣ ಹಂತದ ಪಾರ್ವತಿ ಸಮೇತ ಈಶ್ವರನ ದೇವಾಲಯದ ಆವರಣದಲ್ಲಿ ಬಗುರುವಾರ ನಡೆದ ಕಾರ್ಯಕ್ರಮದಲ್ಲಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ನೀಡಿದ ೨ ಲಕ್ಷ ರೂಪಾಯಿಗಳ ಡಿಡಿಯನ್ನು ದೇವಾಲಯದ ಸಮಿತಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ದೇಶದ ಆರ್ಥಿಕ, ಸಾಮಾಜಿಕ, ಆರೋಗ್ಯ ಅಭಿವೃದ್ಧಿಯು ಗ್ರಾಮೀಣ ಭಾಗದ ಅಭಿವೃದ್ಧಿಯ ಮೇಲೆ ಅವಲಂಬಿಸಿರುವುದನ್ನು ಅರಿತ ಧರ್ಮಸ್ಥಳ ಸಂಘವು ಗ್ರಾಮೀಣ ಭಾಗದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದೆ ಎಂದರು.
ಗ್ರಾಮೀಣ ಭಾಗದ ಜನರ ಆರ್ಥಿಕ, ಆರೋಗ್ಯ, ಸಾಮಾಜಿಕ ಜೀವನ ಮಟ್ಟ ಸುಧಾರಣೆಗೆ ಅನೇಕ ಯೋಜನೆಗಳನ್ನು ರೂಪಿಸಿದೆ, ಅದರಲ್ಲೂ ಮಹಿಳೆಯ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಆ ಎಲ್ಲ ಯೋಜನೆಗಳ ಉಪಯೋಗವನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಸಂಘದ ತಾಲ್ಲೂಕು ಯೋಜನಾಕಾರಿ ಮೋಹನ್ ಮಾತನಾಡಿ, ಸಂಸ್ಥೆಯಿಂದ ಹಮ್ಮಿಕೊಂಡ ವೃದ್ದಾಪ್ಯ ವೇತನ, ದೇವಾಲಯಗಳ ನಿರ್ಮಾಣ, ಜೀರ್ಣೋದ್ಧಾರ, ಕೆರೆಗಳ ಅಭಿವೃದ್ಧಿ, ಡೇರಿ ಕಟ್ಟಡಗಳಿಗೆ ಹಣಕಾಸಿನ ನೆರವು, ಕುಡಿತದ ಚಟ ಬಿಡಿಸುವ ಕಾರ್ಯಾಗಾರ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮುಂತಾದ ಯೋಜನೆಗಳನ್ನು ಅನುಷ್ಠಾನ ಮಾಡಿರುವುದಾಗಿ ವಿವರ ನೀಡಿದರು.
ಲಕ್ಕಹಳ್ಳಿಯ ಪಿಳ್ಳವೆಂಕಟಪ್ಪ ಅವರು ವೈಯಕ್ತಿವಾಗಿ ೨ ಲಕ್ಷ ರೂಪಾಯಿಗಳ ದೇಣಿಗೆಯನ್ನು ಈಶ್ವರನ ದೇವಾಲಯದ ನಿರ್ಮಾಣಕ್ಕಾಗಿ ಈ ಸಂದರ್ಭದಲ್ಲಿ ದೇವಾಲಯದ ಸಮಿತಿಯ ಮುಖಂಡರಿಗೆ ನೀಡಿದರು.
ಶ್ರೀಧರ್ಮಸ್ಥಳದ ಜಿಲ್ಲಾ ಯೋಜನಾಕಾರಿ ವಸಂತ್, ಸೋಮಶೇಖರ್, ಸುರೇಶ್, ಪಾರ್ವತಿಈಶ್ವರ ದೇವಾಲಯ ಸಮಿತಿಯ ಜಯರಾಮರೆಡ್ಡಿ, ಕನ್ನಪ್ಪನಹಳ್ಳಿ ಲಕ್ಷ್ಮೀನಾರಾಯಣ್, ನವೀನ್, ಮಾದವ, ಟಿ.ಎಂ.ದೇವರಾಜ್, ಸತೀಶ್, ನರಸಿಂಹಮೂರ್ತಿ ಹಾಜರಿದ್ದರು.
 

error: Content is protected !!