ಜಿಲ್ಲೆಯ ಪ್ರತಿಯೊಂದು ಶಾಲೆಯಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಕ.ಸಾ.ಪ ಕೇವಲ ನಗರಕ್ಕೆ ಸೀಮಿತವಾಗದಂತೆ ಗ್ರಾಮೀಣ ಭಾಗದಲ್ಲೇ ತಾಲ್ಲೂಕು ಮಟ್ಟದ ಸಮ್ಮೇಳನಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ಕ.ಸಾ.ಪ ಜಿಲ್ಲಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಕೈವಾರ ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಮಳ್ಳೂರು, ಭಕ್ತರಹಳ್ಳಿ, ಆನೂರು, ಮೇಲೂರು ಮುಂತಾದ ಗ್ರಾಮಗಳಲ್ಲಿನ ಕ.ಸಾ.ಪ ಮತದಾರರನ್ನು ಬುಧವಾರ ಭೇಟಿ ಮಾಡಿ ಮತಯಾಚಿಸಿ ಅವರು ಮಾತನಾಡಿದರು.
ಶಾಶ್ವತ ನೀರಾವರಿ ಹೋರಾಟ, ರೇಷ್ಮೆಯ ಸಮಸ್ಯೆ, ರೈತರ ತೊಂದರೆಗಳು, ಜನಸಾಮಾನ್ಯರ ಕಷ್ಟ ಸುಖಗಳಿಗೆ ಸ್ಪಂದಿಸುವುದು ಕೂಡ ಕ.ಸಾ.ಪ ಜವಾಬ್ದಾರಿಯಾಗುತ್ತದೆ. ಜನರ ಬದುಕಿಗೆ ಹತ್ತಿರವಾಗುವುದೇ ನಿಜವಾದ ಕನ್ನಡದ ಸೇವೆಯಾಗುತ್ತದೆ ಎಂದು ಹೇಳಿದರು.
ಸಾಹಿತಿ ಗೋಪಾಲಗೌಡ ಕಲ್ವಮಂಜರಿ, ಯಲುವಳ್ಳಿ ಸೊಣ್ಣೇಗೌಡ, ಮಂಚನಬಲೆ ಶ್ರೀನಿವಾಸ್, ಮಳ್ಳೂರು ಹರೀಶ್, ಎಸ್.ವಿ.ನಾಗರಾಜರಾವ್, ಬಿ.ಆರ್.ಅನಂತಕೃಷ್ಣ, ವಿನಾಯಕ, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.