ತಾಲ್ಲೂಕಿನ ೫ ಜಿಲ್ಲಾ ಪಂಚಾಯತಿ ಕ್ಷೇತ್ರಗಳು ಮತ್ತು ೧೭ ತಾಲ್ಲೂಕು ಪಂಚಾಯತಿ ಕ್ಷೇತ್ರಗಳಿಗೆ ಚುನಾವಣೆ ಮುಕ್ತಾಯವಾಗಿದ್ದು, ಎಲ್ಲಾ ಅಭ್ಯರ್ಥಿಗಳ ಭವಿಷ್ಯ, ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ಚುನಾವಣಾ ವೀಕ್ಷಕರು ಭಾನುವಾರ ಮತಪೆಟ್ಟಿಗೆಗಳಿಗೆ ಒದಗಿಸಲಾಗಿರುವ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಿದರು.
ನಗರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಇಟ್ಟಿರುವ ಮತಪೆಟ್ಟಿಗೆಗಳಿಗೆ ಒದಗಿಸಿರುವ ಭದ್ರತೆ ಹಾಗೂ ನಿಯೋಜನೆ ಮಾಡಲಾಗಿರುವ ಪೊಲೀಸ್ ಸಿಬ್ಬಂದಿಯ ಬಗ್ಗೆ ತಹಶೀಲ್ದಾರ್ ಕೆ.ಎಂ.ಮನೋರಮಾ ಅವರಿಂದ ಮಾಹಿತಿ ಪಡೆದುಕೊಂಡ ಚುನಾವಣಾ ವೀಕ್ಷಕ ರವಿ, ಮತಗಟ್ಟೆ ಅಧಿಕಾರಿಗಳು ಒದಗಿಸಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಭದ್ರತಾಕೊಠಡಿಯ ಸುತ್ತಮುತ್ತಲಿನ ಪ್ರದೇಶ ಬಯಲಾಗಿರುವುದರಿಂದ ಪೊಲೀಸ್ ಇಲಾಖೆಯ ಅಧಿಕಾರಿಗಳು, ಹೆಚ್ಚು ಭದ್ರತೆಯನ್ನು ಒದಗಿಸುವ ಮೂಲಕ ಸೂಕ್ತ ಭದ್ರತೆಯನ್ನು ವಹಿಸಬೇಕು, ಎಂದು ಸೂಚಿಸದರು.
ಗ್ರೇಡ್-೨ ತಹಶೀಲ್ದಾರ್ ವಾಸುದೇವಮೂರ್ತಿ, ಚುನಾವಣಾಧಿಕಾರಿಗಳಾದ ಪುರುಷೋತ್ತಮ್, ಲಕ್ಷ್ಮೀನಾರಾಯಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.