ಪಾರದರ್ಶಕ, ನಿರ್ಭೀತಿಯ ವಾತಾವರಣದಲ್ಲಿ ಚುನಾವಣೆ ನಡೆಸಲಿಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಚುನಾವಣೆಯಲ್ಲಿ ಲೋಪವೆಸಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಶಿವಕುಮಾರ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೯ ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ೧೮ ವರ್ಷಗಳು ಪೂರ್ಣಗೊಂಡಿರುವ ಯುವಜನರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲಿಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ.
ಮತದಾರರು ನಿರ್ಭೀತಿಯಿಂದ ಮತಚಲಾಯಿಸಲಿಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಭದ್ರತೆಗಳನ್ನು ಒದಗಿಸುವ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಅಕ್ರಮಗಳ ಬಗ್ಗೆ ಜನರು ನೇರವಾಗಿ “ಸಿ.ವಿಜಿಲ್” ಆಪ್ ಮೂಲಕ ೫ ನಿಮಿಷಗಳಲ್ಲಿ ದೂರು ದಾಖಲಿಸಬಹುದು. ದೂರು ದಾಖಲಾದ ೧೦೦ ನಿಮಿಷಗಳಲ್ಲಿ ನಮ್ಮ ತಂಡ ದೂರಗಳ ಬಗ್ಗೆ ಕ್ರಮ ವಹಿಸಲಿದೆ. ದೂರು ನೀಡಿದವರ ಮಾಹಿತಿಗಳನ್ನು ಗೌಪ್ಯವಾಗಿಡಲಾಗುತ್ತದೆ. ಯಾರೂ ಇದನ್ನು ದುರುಪಯೋಗ ಮಾಡಿಕೊಳ್ಳಬಾರದು.
ಚುನಾವಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಾಹನಗಳಲ್ಲಿ ಜಿ.ಪಿ.ಎಸ್.ವ್ಯವಸ್ಥೆ ಅಳವಡಿಸಲಾಗಿದೆ. ತಾಲ್ಲೂಕಿನಲ್ಲಿ ಒಟ್ಟು ೧,೯೮,೧೮೯ ಮಂದಿ ಮತದಾರರು ಇದ್ದಾರೆ. ೯೯೮೪೦ ಮಂದಿ ಪುರುಷರು, ೯೮೩೩೯ ಮಂದಿ ಮಹಿಳೆಯರು, ೧೦ ಮಂದಿ ಇತರೆ ಮತದಾರರಿದ್ದಾರೆ. ೨೪೨ ಮತಗಟ್ಟೆಗಳಿವೆ. ೧ ಹೆಚ್ಚುವರಿ ಮತಗಟ್ಟೆ ಮಾಡಲಾಗಿದೆ. ೫ ಅತಿಸೂಕ್ಷ್ಮ ಮತಗಟ್ಟೆಗಳು, ಸಮಸ್ಯಾತ್ಮಕ ಮತಗಟ್ಟೆಗಳು ೫೭, ಸೂಕ್ಷ್ಮ ಮತಗಟ್ಟೆಗಳು ೫೩, ಸಾಧಾರಣ ಮತಗಟ್ಟೆಗಳು ೧೩೨, ಎಲ್ಲಾ ಮತಗಟ್ಟೆಗಳಲ್ಲಿ ಇ.ವಿ.ಎಂ.ಯಂತ್ರಗಳ ಮೂಲಕ ಮತದಾನವಾಗಲಿದ್ದು ಅಭ್ಯರ್ಥಿಗಳು ಅಂತಿಮವಾದ ನಂತರ ಇ.ವಿ.ಎಂಗಳು ಸಿದ್ದಗೊಳ್ಳಲಿವೆ ಎಂದರು.
ತಹಶೀಲ್ದಾರ್ ಅಜಿತ್ಕುಮಾರ್ ರೈ ಮಾತನಾಡಿ, ಚುನಾವಣೆ ಅಕ್ರಮಗಳಲ್ಲಿ ತೊಡಗಿರುವವರು ಎಷ್ಟೇ ಪ್ರಭಾವಿಗಳಿದ್ದರೂ ಅಂತಹವರ ಮೇಲೆ ನೇರವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಮತದಾರರ ಮೇಲೆ ಇಂತಹ ಪಕ್ಷಕ್ಕೆ ಮತ ಹಾಕಬೇಕು ಎಂದು ಒತ್ತಡ ಹೇರುವುದು, ಆಮಿಷಗಳನ್ನು ಒಡ್ಡುವುದನ್ನು ಮಾಡುವಂತಿಲ್ಲ, ಬಲಾಡ್ಯರು, ದುರ್ಬಲ ವರ್ಗದವರ ಮೇಲೆ ದೌರ್ಜನ್ಯ ನಡೆಸಿ ಮತದಾನ ಮಾಡಿಸುವಂತಹ ಘಟನೆಗಳ ನಡೆಯದಂತೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಚುನಾವಣೆ ಅಕ್ರಮಗಳ ಕುರಿತು ಕಂಡು ಬಂದರೆ ದೂರು ಸಲ್ಲಿಸಬಹುದು.
ಸಹಾಯಕ ಚುನಾವಣೆ ಅಧಿಕಾರಿ ೯೪೪೮೮೦೮೩೫೬, ಕಚೇರಿ ೦೮೧೫೮ ೨೫೬೭೬೪, ಕಂಟ್ರೋಲ್ ರೂಂ ಸಂಖ್ಯೆ ೦೮೧೫೮೨೫೬೭೬೩ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದರು. ನಗರಸಭಾ ಆಯುಕ್ತ ಜಿ.ಎನ್.ಚಲಪತಿ ಹಾಜರಿದ್ದರು.