Home News ಜೀವ ವಿಮಾ ಸಪ್ತಾಹ ನೋಂದಣಿ

ಜೀವ ವಿಮಾ ಸಪ್ತಾಹ ನೋಂದಣಿ

0

ಜೀವ ವಿಮಾ ಸಪ್ತಾಹ ನೋಂದಣಿಯನ್ನು ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಡಿಸೆಂಬರ್ 23 ರಿಂದ ಒಂದು ವಾರದ ಕಾಲ ನಡೆಸುತ್ತಿರುವುದಾಗಿ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್ ಗೌಡ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರೀಯ ವೇಡ್ಪಾಲ್ ಭೀಮಾ ಯೋಜನೆಯು ಕುರಿಗಾರರಿಗೆ ಕೇಂದ್ರ ಸರ್ಕಾರದ ನೆರವಿನೊಂದಿಗೆ ಅನುಷ್ಠಾನಗೊಳ್ಳುತ್ತಿದೆ. ಈ ಪಾಲಿಸಿಗೆ ಕಟ್ಟಬೇಕಾದ ಒಟ್ಟು ಮೊತ್ತ 330 ರೂ ಆಗಿದ್ದು, ಅದರಲ್ಲಿ ಕುರಿಗಾರರು 80 ರೂಗಳನ್ನು ನೀಡಿದರೆ, ಎಲ್.ಐ.ಸಿ 100 ರೂಗಳನ್ನು ಮತ್ತು ಕೇಂದ್ರೀಯ ಉಣ್ಣೆ ನಿಗಮ 150 ರೂಗಳನ್ನು ಭರಿಸುತ್ತದೆ. ಈ ವಿಮೆಗೆ ಒಳಪಟ್ಟ ಕುರಿಗಾರರ ಕುಟುಂಬದಲ್ಲಿ ಯಾರಾದರೂ ಸ್ವಾಭಾವಿಕ ಮರಣ ಹೊಂದಿದಲ್ಲಿ ಎಲ್.ಐ.ಸಿ 60 ಸಾವಿರ ರೂಗಳನ್ನು ನೀಡುತ್ತದೆ. ಆಕಸ್ಮಿಕವಾದ ದುರ್ಘಟನೆಯಿಂದ ಒಂದು ಕಣ್ಣು ಅಥವಾ ಕಿವಿ ಅಥವಾ ಕಾಲು ಕಳೆದುಕೊಂಡಲ್ಲಿ 75 ಸಾವಿರ ರೂಗಳನ್ನು, ಅಕಸ್ಮಾತ್ ಎರಡೂ ಕಣ್ಣು ಅಥವಾ ಕಿವಿ ಅಥವಾ ಕಾಲು ಕಳೆದುಕೊಂಡಲ್ಲಿ ಒಂದೂವರೆ ಲಕ್ಷ ಪರಿಹಾರವಾಗಿ ಸಿಗುತ್ತದೆ.
ಈ ವಿಮೆಗೆ ಒಳಪಟ್ಟ ಕುರಿಗಾರರ ಮಕ್ಕಳಿಗೆ ಒಂಭತ್ತರಿಂದ ಪಿಯುಸಿ ವರೆಗಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ಸಹ ಸಿಗಲಿದೆ. ಒಂದು ಕುಟುಂಬದ ಇಬ್ಬರು ಮಕ್ಕಳಿಗೆ ತಲಾ 1200 ರೂಗಳು ವಾರ್ಷಿಕವಾಗಿ ನೀಡಲಾಗುತ್ತದೆ. ರಾಜ್ಯ ಸರ್ಕಾರ ಕುರಿಗಳು ಆಕಸ್ಮಿಕವಾಗಿ ಮೃತಪಟ್ಟರೆ ನೀಡುತ್ತಿದ್ದ 3000 ರೂ ಪರಿಹಾರ ಧನವನ್ನು 5 ಸಾವಿರ ರೂಗಳಿಗೆ ಏರಿಸಿದ್ದಾರೆ. ಆದರೆ ಇದು ತಾತ್ಕಾಲಿಕ ಯೋಜನೆಯಾಗಿದೆ. ಒಂದು ವಾರದ ಕಾಲ ನಡೆಯುವ ಈ ನೋಂದಣಿ ಕಾರ್ಯದಲ್ಲಿ ಕುರಿಗಾರರು ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು. ಜನವರಿ ತಿಂಗಳಿನಲ್ಲಿ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರ ಮೂಲಕ ವಿಮೆಯ ಸರ್ಟಿಫಿಕೇಟ್ ವಿತರಿಸಲಾಗುತ್ತದೆ.
ಹರಿಯಾಣದ ಇಸ್ಸಾರಿನ ಕೇಂದ್ರೀಯ ಕುರಿಸಾಕಾಣಿಕಾ ಕೇಂದ್ರಕ್ಕೆ ಫೆಬ್ರುವರಿ ತಿಂಗಳಿನಲ್ಲಿ ನಮ್ಮ ಸಂಘದಿಂದ 25 ಮಂದಿ ಕುರಿಗಾರರನ್ನು ಆರು ದಿನಗಳ ತರಬೇತಿಗೆ ಕಳುಹಿಸಿಕೊಡಲಾಗುತ್ತದೆ. ರಾಣೆಬೆನ್ನೂರಿನ ಉಣ್ಣೆ ಉತ್ಪನ್ನಗಳ ಮಾರಾಟ ಮಂಡಳಿಯು ಸಂಘದ ಆಯ್ದ ಸದಸ್ಯರಿಗೆ ತಿಂಗಳಿಗೆ 3 ಸಾವಿರ ರೂಗಳ ವಿದ್ಯಾರ್ಥಿ ವೇತನದೊಂದಿಗೆ ಆರು ತಿಂಗಳ ಕಾಲ ತರಬೇತಿಯನ್ನು ಉಚಿತವಾಗಿ ನೀಡುತ್ತಿದೆ. ರಾಜಾಸ್ಥಾನದ ಜೋದ್ಪುರಕ್ಕೆ ಇಬ್ಬರನ್ನು ಒಂದು ವಾರದ ಕಾಲ ಉಣ್ಣೆಯ ಕುರಿತಂತೆ ತರಬೇತಿಗೂ ಸಂಘದಿಂದ ಕಳುಹಿಸುವುದಾಗಿ ತಿಳಿಸಿದರು.
ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ನಿರ್ದೇಶಕರಾದ ರಾಮಣ್ಣ, ಶಿವಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!