ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ರ ಅಗಲಿಕೆ ಇಡೀ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಸಾಪ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್ ಹೇಳಿದರು.
ತಾಲ್ಲೂಕಿನ ಯಣ್ಣಂಗೂರು ಗ್ರಾಮದ ಹಾಲು ಉತ್ಪಾದಕರ ಸಹಾಕರ ಸಂಘದ ಆವರಣದಲ್ಲಿ ಕಸಾಪ ಪದಾಧಿಕಾರಿಗಳೊಂದಿಗೆ ಸೋಮವಾರ ಗಿರೀಶ್ ಕರ್ನಾಡ್ರಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದರು.
ಗಿರೀಶ್ ಕಾರ್ನಾಡ್ ಅವರು ಸಾಹಿತಿಯಾಗಿ ಅಲ್ಲದೇ ಚಿತ್ರರಂಗದಲ್ಲಿಯೂ ಗಣನೀಯ ಸೇವೆ ಸಲ್ಲಿಸಿ ದೇಶದ ಪ್ರತಿಷ್ಠಿತ ಪದ್ಮಶ್ರೀ ಸೇರಿದಂತೆ ವಿವಿಧ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಜನಪದ, ಐತಿಹಾಸಿಕ, ಪುರಾಣ ವಸ್ತುಗಳನ್ನೊಳಗೊಂಡ ನಾಟಕಗಳ ರಚನೆಯ ಮೂಲಕ ನಾಡಿನ ಮನೆ ಮಾತಾಗಿದ್ದರು ಎಂದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕರ್ನಾಡ್ರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಕಸಾಪ ಜಿಲ್ಲಾ ಖಜಾಂಚಿ ನಂಜುಂಡಪ್ಪ, ವೈದ್ಯ ಡಾ.ಮಂಜುನಾಥ್, ಕಸಾಪ ಪದಾಧಿಕಾರಿಗಳಾದ ಅಶೋಕ್, ಪ್ರಭು, ಶ್ರೀಧರ್, ಗ್ರಾಮಸ್ಥರಾದ ನಾಗೇಶ್, ಕೃಷ್ಣಪ್ಪ, ಮಕ್ಸೂದ್, ಪಿಳ್ಳನಾರಾಯಣಪ್ಪ, ನಂಜುಡಪ್ಪ ಕಾರ್ಯಕ್ರಮದಲ್ಲಿ ಹಾಜರಿದ್ದರು.