ನಗರದ ಪ್ರವಾಸಿಮಂದಿರಲ್ಲಿ ಭಾನುವಾರ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಆದೇಶ ಪತ್ರ ನೀಡಿ ಟಿಪ್ಪು ಸೆಕ್ಯೂಲರ್ ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಶಬೀರ್ ಪಾಷ ಮಾತನಾಡಿದರು.
ಟಿಪ್ಪು ಸೆಕ್ಯೂಲರ್ ಸೇನೆಯು ಎಲ್ಲಾ ಜಾತಿ, ಧರ್ಮಗಳೊಟ್ಟಿಗೆ ಸಾಮರಸ್ಯವನ್ನು ಕಾಪಾಡಿಕೊಂಡು ಹೋಗುವಂತಹ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ಎಲ್ಲಾ ಜಯಂತಿಗಳಿಗೆ ಸಹಕಾರ ನೀಡುವ ಕೆಲಸ ಮಾಡಬೇಕು, ಸಮಾಜದಲ್ಲಿ ನಾವು ಎಲ್ಲರೊಟ್ಟಿಗೆ ಬೆರತು ಬದುಕು ಕಟ್ಟಿಕೊಳ್ಳಬೇಕು ಎನ್ನುವ ಸಂದೇಶವನ್ನು ಎಲ್ಲೆಡೆ ಸಾರಬೇಕಾಗಿದೆ. ನಾವು ಈ ನಾಡಿನಲ್ಲಿ ಹುಟ್ಟಿದ್ದೇವೆ. ನಾಡಿನ ಋಣ ತೀರಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಮಾತನಾಡಿ, ಟಿಪ್ಪುಸುಲ್ತಾನ್ ಕೇವಲ ಮುಸ್ಲಿಂ ಸಮುದಾಯದ ನಾಯಕರಲ್ಲ, ಅವರು ಎಲ್ಲಾ ಸಮುದಾಯಗಳ ನಾಯಕರು ಎಂದು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಅವರೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು, ರಾಜ್ಯದ ಏಳಿಗೆಗಾಗಿ ತಮ್ಮ ಮಕ್ಕಳನ್ನು ಬ್ರಿಟೀಷರ ಬಳಿಯಲ್ಲಿ ಒತ್ತೆಯಿಟ್ಟಿದ್ದರು. ಅವರು ರೇಷ್ಮೆಯನ್ನು ನಮಗೆ ಪರಿಚಯಿಸಿದ್ದರಿಂದ ಇಂದು ಈ ಭಾಗದಲ್ಲಿ ರೇಷ್ಮೆ ಒಂದು ಉದ್ಯಮವಾಗಿ ಬೆಳೆದು ನಿಂತಿದೆ. ಪ್ರತಿಯೊಬ್ಬ ರೈತರು ಟಿಪ್ಪುಸುಲ್ತಾನ್ ಅವರನ್ನು ನೆನೆಸಿಕೊಳ್ಳಬೇಕಾಗಿದೆ.
ಅವರು ರಾಜ್ಯಭಾರ ಮಾಡುವಾಗ ಹಿಂದೂಗಳಿಗೂ ಸ್ಥಾನಮಾನಗಳನ್ನು ಕೊಟ್ಟಿದ್ದರು. ಅನೇಕ ಹಿಂದೂ ದೇವಾಲಯಗಳನ್ನು ಕಟ್ಟಿಸಿದ್ದಾರೆ. ಜೀರ್ಣೋದ್ಧಾರ ಮಾಡಿದ್ದಾರೆ. ಅವರಿಗೆ ಹಿಂದೂ ವಿರೋಧಿ ಪಟ್ಟ ಕಟ್ಟುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಟಿಪ್ಪು ಸೆಕ್ಯೂಲರ್ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಅಪ್ಜಲ್ ಪಾಷ ಅವರನ್ನು ನೇಮಕ ಮಾಡಿ ರಾಜ್ಯ ಘಟಕದ ಅಧ್ಯಕ್ಷ ಕೆ.ಶಬೀರ್ ಪಾಷ ಆದೇಶ ಪತ್ರ ನೀಡಿದರು.
ನೂತನ ತಾಲ್ಲೂಕು ಅಧ್ಯಕ್ಷ ಅಪ್ಜಲ್ ಪಾಷ ಮಾತನಾಡಿ, ತಾಲ್ಲೂಕಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಎಲ್ಲಾ ಸಮುದಾಯಗಳೊಟ್ಟಿಗೆ ಉತ್ತಮ ಭಾಂಧವ್ಯ ವೃದ್ಧಿಸಿಕೊಂಡು ಸಮಾಜದ ಏಳಿಗೆಗಾಗಿ ಸೇನೆಯ ಪದಾಧಿಕಾರಿಗಳ ಸಹಕಾರದಲ್ಲಿ ಮುನ್ನಡೆಯುತ್ತೇವೆ. ರಾಜ್ಯ ಘಟಕದ ಅಧ್ಯಕ್ಷರ ಸಲಹೆಯ ಮೇರೆಗೆ ಎಲ್ಲಾ ಜಯಂತಿಗಳಲ್ಲಿ ಭಾಗವಹಿಸಿ ಸಹಕಾರ ನೀಡುತ್ತೇವೆ ಎಂದರು.
ಚಿಂತಾಮಣಿ ರೈತ ಸಂಘದ ಮುಖಂಡ ಹುಸೇನ್ ಸಾಬ್, ಮೈನುದ್ಧೀನ್ ಪಾಷ, ಡಾ.ಶಬೀರ್, ಜಹೀರ್, ಆಸೀಪ್ ಪಾಷ, ಬಾಬು ಹಾಜರಿದ್ದರು.