ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಅಂಬೇಡ್ಕರ್ ಕಲ್ಪನೆಯ ಸಾಮಾಜಿಕ ಬದಲಾವಣೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗಬೇಕಾಗಿದೆ ಎಂದು ಬೆಂಗಳೂರು ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ನಗರಗೆರೆ ರಮೇಶ್ ಅಭಿಪ್ರಾಯಪಟ್ಟರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಶುಕ್ರವಾರ ಆಯೋಜನೆ ಮಾಡಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಕೃತಿಗಳ ಕುರಿತು ಸಮಾಜದ ಎಲ್ಲಾ ವರ್ಗಗಳ ಜನತೆ, ಶೋಷಿತ ಸಮುದಾಯ, ಮಾಧ್ಯಮಗಳು ಸೇರಿ ಎಲ್ಲರ ಜೊತೆ ವಿವರವಾದ ಚರ್ಚೆ ಸಂವಾದ ನಡೆಸಬೇಕು. ಅಂಬೇಡ್ಕರ್ ತಿಳಿಸಿದಂತೆ ನಮ್ಮ ಚಿಂತನೆಗಳು ಮತ್ತು ಬರವಣಿಗೆ ದೃಢವಾಗಿದ್ದರೆ ರಾಷ್ಟ್ರ ಸದೃಢವಾಗಿರುತ್ತದೆ. ಸಮಾಜದಲ್ಲಿನ ಎಲ್ಲಾ ಜಾತಿ ವರ್ಗದ ಜನರನ್ನು ಒಗ್ಗಟ್ಟಿನಿಂದ ಕಾಣಬೇಕೆಂಬ ಹಂಬಲ ಹೊಂದಿದ್ದ ಅಂಬೇಡ್ಕರ್ ಅವರನ್ನು ದಲಿತರ ನಾಯಕ ಎಂಬ ಪಟ್ಟಕಟ್ಟಿ ಒಂದು ಜನಾಂಗ(ಸಮುದಾಯ) ಕ್ಕೆ ಸೀಮಿತಗೊಳಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ. ವಿದ್ಯಾರ್ಥಿಗಳು ಇತಿಹಾಸವನ್ನು ಓದಬೇಕು. ಕೇವಲ ಕಾಲ್ಪನಿಕ ಕಟ್ಟುಕಥೆಗಳಿಂದ ಇತಿಹಾಸ ತಿಳಿಯಲು ಸಾಧ್ಯವಾಗುವುದಿಲ್ಲ. ಅಂಬೇಡ್ಕರ್ ಅವರೇ ಹೇಳುವಂತೆ ಇತಿಹಾಸ ತಿಳಿಯದವರು ಇತಿಹಾಸವನ್ನು ಸೃಷ್ಠಿಸಲಾರರು ಎಂಬ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ನಡಿಪಿನಾಯಕನಹಳ್ಳಿ ವೆಂಕಟೇಶ್ ಮಾತನಾಡಿ, ಸಮಾಜದಲ್ಲಿನ ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಭ್ರಷ್ಟಾಚಾರ, ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಯುವಸಮುದಾಯ ಸಂಘಟಿತರಾಗಬೇಕು. ದೇವಾಲಯಗಳ ಮುಂದೆ ಸಾಲಿನಲ್ಲಿ ನಿಂತರೆ ನಮ್ಮ ಜೀವನ ಬದಲಾಗುವುದಿಲ್ಲ. ಗ್ರಂಥಾಲಯಗಳಿಗೆ ಹೋಗಿ ಪುಸ್ತಕಗಳನ್ನು ಓದುವಂತಹ ಪ್ರವೃತ್ತಿ ಬೆಳೆಸಿಕೊಂಡಾಗ ನಮ್ಮ ಬದುಕು ಹಸನಾಗುತ್ತದೆ. ಮಹಿಳಾ ಸಬಲೀಕರಣವಾಗಬೇಕು. ಈ ದೇಶದಲ್ಲಿನ ಪ್ರತಿಯೊಂದು ಮಗುವಿಗೂ ಶಿಕ್ಷಣ ಸಿಗಬೇಕು. ಶಿಕ್ಷಣ ರಾಷ್ಟ್ರೀಕರಣವಾದಾಗ, ಅಸ್ಪೃಶ್ಯತೆ, ಜಾತಿಯ ಸಂಕೋಲೆಗಳಿಂದ ದೇಶ ಮುಕ್ತವಾದಾಗ ಮಾತ್ರ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ ಎಂದರು.
ಪ್ರಾಂಶುಪಾಲ ಚಂದ್ರಾನಾಯಕ್ ಮಾತನಾಡಿ, ದೇಶದ ಪ್ರತಿಯೊಬ್ಬ ನಾಗರಿಕರು ಸಹಕಾರಿ ತತ್ವದಡಿಯಲ್ಲಿ ಜೀವನ ರೂಪಿಸಿಕೊಳ್ಳುತ್ತಿರುವುದಕ್ಕೆ ಕಾರಣ ಸಂವಿಧಾನ, ಇದನ್ನು ರಚನೆ ಮಾಡುವಲ್ಲಿ ಬಹಳಷ್ಟು ಶ್ರಮಪಟ್ಟಿರುವ ಅಂಬೇಡ್ಕರ್ ಅವರು ಎಲ್ಲರಿಗೂ ಮಾದರಿಯಾಗಬೇಕು. ವಿದ್ಯಾರ್ಥಿಗಳು ಇತಿಹಾಸವನ್ನು ಸೃಷ್ಠಿ ಮಾಡುವಂತಹ ನಾಯಕರುಗಳಾಗಿ ರೂಪುಗೊಳ್ಳಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅನಸೂಯದೇವಿ, ಅಂಬೇಡ್ಕರ್ ಜ್ಞಾನ ದರ್ಶನ ಕೋಲಾರದ ವಲಯ ಸಂಯೋಜಕಿ ಪದ್ಮ, ಸಹಾಯಕ ಪ್ರಾಧ್ಯಾಪಕ ಎಂ.ಮುನಿರಾಜು, ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ, ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಗುರುಮೂರ್ತಿ ಮುಂತಾದವರು ಹಾಜರಿದ್ದರು.