Home News ಡಿ.ಕೆ.ರವಿ ಅವರ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು

ಡಿ.ಕೆ.ರವಿ ಅವರ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು

0

‘ಡಿ.ಕೆ.ರವಿ ಅವರ ಈ ಸಾವು ನ್ಯಾಯವೇ?’, ‘ಭೂ ಮಾಫಿಯಾಗೆ ಧಿಕ್ಕಾರ. ಉತ್ತಮ ಅಧಿಕಾರಿಗಳಿಗೆ ರಕ್ಷಣೆ ನೀಡದ ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆಗಳನ್ನು ಕೂಗುತ್ತಾ ಒಂದೆಡೆ ರೇಷ್ಮೆ ಗೂಡು ಮಾರುಕಟ್ಟೆಯ ಬಳಿಯಿಂದ ರೈತ ಮುಖಂಡರು ಮೆರವಣಿಗೆ ನಡೆಸಿದರು. ಮತ್ತೊಂದೆಡೆ ಎಸ್.ಎಫ್.ಐ ನೇತೃತ್ವದಲ್ಲಿ ಐ.ಟಿ.ಐ ಕಾಲೇಜಿನ ವಿದ್ಯಾರ್ಥಿಗಳು ಕೂಡ ಡಿ.ಕೆ.ರವಿ ಅವರ ಈ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.

ಶಿಡ್ಲಘಟ್ಟದಲ್ಲಿ ಮಂಗಳವಾರ ಡಿ.ಕೆ.ರವಿ ಅವರ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ರೈತ ಮುಖಂಡರು ತಹಶಿಲ್ದಾರ್ ಕಚೇರಿಯ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಶಿಡ್ಲಘಟ್ಟದಲ್ಲಿ ಮಂಗಳವಾರ ಡಿ.ಕೆ.ರವಿ ಅವರ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ರೈತ ಮುಖಂಡರು ತಹಶಿಲ್ದಾರ್ ಕಚೇರಿಯ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
‘ನಮ್ಮ ನೆರೆಯ ಜಿಲ್ಲೆಯಾದ ಕೋಲಾರದಲ್ಲಿ ಕಾರ್ಯನಿರ್ವಹಿಸಿದ್ದ ದಕ್ಷ ಅಧಿಕಾರಿ ಡಿ.ಕೆ.ರವಿ ಅವರು ಭೂ ಮಾಫಿಯಾ, ಮರಳು ದಂಧೆಗೆ ಕಡಿವಾಣ ಹಾಕಿದ್ದಲ್ಲದೆ, ಕೆರೆ ಒತ್ತುವರಿಯನ್ನು ತೆರವುಗೊಳಿಸುವ ಹಾಗೂ ತೆರಿಗೆ ವಂಚಕರಿಂದ ತೆರಿಗೆ ವಸೂಲಿ ಮಾಡುವ ಮೂಲಕ ಭ್ರಷ್ಟರಿಗೆ ಚುರುಕು ಮುಟ್ಟಿಸಿದ್ದರು. ಜನಸಾಮಾನ್ಯರ ಪರವಾಗಿದ್ದ ಅವರು ಸರ್ಕಾರಕ್ಕೆ ಅತ್ಯಧಿಕ ಆದಾಯ ತಂದುಕೊಟ್ಟಿದ್ದರು. ನಮ್ಮ ರಾಜ್ಯ ಹಾಗೂ ದೇಶಕ್ಕೆ ನಿಷ್ಟಾವಂತ ಮತ್ತು ದಕ್ಷ ಅಧಿಕಾರಿಗಳ ಅವಶ್ಯಕತೆಯಿದೆ. ದಕ್ಷ ಅಧಿಕಾರಿ ಡಿ.ಕೆ.ರವಿ ಅವರ ಸಾವು ಸಂಶಯಾಸ್ಪದವಾಗಿದ್ದು, ಅವರ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು’ ರೈತ ಮುಖಂಡ ಮಳ್ಳೂರು ಹರೀಶ್ ಒತ್ತಾಯಿಸಿದರು.
ರೈತಮುಖಂಡರು ತಹಶಿಲ್ದಾರ್ ಕಚೇರಿಯ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು. ಅಬ್ಲೂಡು ಆರ್.ದೇವರಾಜ್, ಭಕ್ತರಹಳ್ಳಿ ಬೈರೇಗೌಡ, ತ್ಯಾಗರಾಜ್, ರಾಮಚಂದ್ರ, ಚಿಕ್ಕಮಾರಪ್ಪ, ಅಂಬರೀಷ್, ಶ್ರೀನಿವಾಸ್, ಗೋವಿಂದಪ್ಪ, ರಾಜಗೋಪಾಲ್, ಎಸ್.ಎಫ್.ಐ ಮುಖಂಡ ಮುನೀಂದ್ರ, ನರಸಿಂಹಮೂರ್ತಿ, ಆನಂದಕುಮಾರ್, ನವೀನ್, ರಾಜೇಶ್, ಭರತ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!