Home News ತಲದುಮ್ಮನಹಳ್ಳಿ ಗ್ರಾಮದಲ್ಲಿ ಚುನಾವಣೆ ಭಹಿಷ್ಕಾರ

ತಲದುಮ್ಮನಹಳ್ಳಿ ಗ್ರಾಮದಲ್ಲಿ ಚುನಾವಣೆ ಭಹಿಷ್ಕಾರ

0

ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಯಲುಸೀಮೆ ಪ್ರದೇಶದಲ್ಲಿ ಅಂತರಜಲ ಕುಸಿದಿದ್ದು. ಕುಡಿಯಲು, ಕೃಷಿ ಮಾಡಲು ನೀರಿಲ್ಲದೆ ಹಾಹಾಕಾರ ಎದ್ದಿದೆ. ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ನಾವು ಇರುವ ಊರನ್ನು ಬಿಟ್ಟು ಗುಳೇ ಹೋಗಬೇಕಾಗುತ್ತದೆ. ನಾವು ಕೃಷಿ ಮಾಡಿಕೊಂಡು ಸ್ವಾಭಿಮಾನಿಗಳಾಗಿ ಬದುಕಲು ನಮಗೆ ಶಾಶ್ವತ ನೀರು ಬೇಕೇಬೇಕು. ಆದರೆ ನಮ್ಮನ್ನು ಆಳುವ ಸರ್ಕಾರಗಳು ಕಳೆದ ಮೂವತ್ತು ವರ್ಷಗಳಿಂದ ಆಶ್ವಾಸನೆಗಳನ್ನಷ್ಟೇ ನೀಡುತ್ತಾ ಬಂದಿದ್ದಾರೆ. ಇನ್ನು ನಮಗೆ ತಾಳ್ಮೆ ಇಲ್ಲ. ಇಡೀ ಕ್ಷೇತ್ರದ ಮತದಾರ ಬಂಧುಗಳು ಮತದಾನ ಬಹಿಷ್ಕಾರದ ತೀರ್ಮಾನ ತೆಗೆದುಕೊಂಡಿದ್ದೇ ಆದಲ್ಲಿ ನಮ್ಮ ಜನಪ್ರತಿನಿಧಿಗಳಿಗೆ ಬುದ್ಧಿ ಬರುತ್ತದೆ. ಶಾಶ್ವತ ನೀರಾವರಿ ಯೋಜನೆ ಜಾರಿಯಾಗುತ್ತದೆ ಎಂದು ತಲದುಮ್ಮನಹಳ್ಳಿಯ ಶಾಶ್ವತ ನೀರಾವರಿ ಹೋರಾಟಗಾರರು ಕರಪತ್ರದ ಮೂಲಕ ಜನರಲ್ಲಿ ಮನವರಿಕೆ ಮಾಡುತ್ತಿದ್ದರು.
‘ಲೋಕಸಭೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳೇ, ಎಲ್ಲಾ ಪಕ್ಷಗಳ ಮುಖಂಡರೇ, ಬಯಲುಸೀಮೆಯ ಪ್ರದೇಶಕ್ಕೆ ಪರಮಶಿವಯ್ಯನವರ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡದ ಹೊರತು ನಮ್ಮೂರಿನ ಪ್ರಜ್ಞಾವಂತ ಮತದಾರರಲ್ಲಿ ಮತಯಾಚಿಸುವ ಹಕ್ಕು ನಿಮಗಿರುವುದಿಲ್ಲ. ನಾವು ನಿಮಗೆ ಮತಹಾಕುವುದಿಲ್ಲ’ ಎಂದು ತಲದುಮ್ಮನಹಳ್ಳಿ ಗ್ರಾಮಸ್ಥರು ಬ್ಯಾನರನ್ನು ಮತಯಾಚಿಸಲು ಬರುವವರ ಮುಖಕ್ಕೆ ರಾಚುವಂತೆ ಗ್ರಾಮದ ವೇಣುಗೋಪಾಲಸ್ವಾಮಿ ದೇವಾಲಯದ ಬಳಿ ಕಟ್ಟಿದ್ದರು.
ತಲದುಮ್ಮನಹಳ್ಳಿ ಗ್ರಾಮಸ್ಥರ ಮತದಾನದ ಬಹಿಷ್ಕಾರದ ವಿಷಯ ತಿಳಿದು ಸೋಮವಾರ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಸಹಾಯಕ ಚುನಾವಣಾ ಅಧಿಕಾರಿ ಯೋಗೇಶ್, ಗ್ರಾಮಾಂತರ ಠಾಣೆ ಸಬ್ಇನ್ಸ್ಪೆಕ್ಟರ್ ಹನುಮಂತಪ್ಪ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಗ್ರಾಮಸ್ಥರ ಉದ್ದೇಶ ಹಾಗೂ ನೀರಿಗಾಗಿನ ಹೋರಾಟದ ಬಗ್ಗೆ ಕೇಳಿ ಮಾತನಾಡಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ‘ಮತದಾನ ಪ್ರತಿಯೊಬ್ಬರ ಹಕ್ಕಾಗಿದೆ. ಚುನಾವಣೆಗೆ ನಿಂತ ಅಭ್ಯರ್ಥಿಗಳು ಸೂಕ್ತರಲ್ಲವೆಂದು ಅನ್ನಿಸಿದಲ್ಲಿ ಮತಯಂತ್ರದಲ್ಲಿ ನೋಟಾ ಎಂಬ ಬಟನ್ ಒತ್ತುವುದರಿಂದ ತಮ್ಮ ಇಚ್ಛೆಯನ್ನು ಅಭಿವ್ಯಕ್ತಿಸಬಹುದು. ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಚುನಾವಣೆಯನ್ನು ಬಹಿಷ್ಕರಿಸುವುದು ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡುವಂತಿಲ್ಲ’ ಎಂದು ಹೇಳಿ ಗ್ರಾಮಸ್ಥರನ್ನು ಮನವೊಲಿಸಲು ಪ್ರಯತ್ನಿಸಿದರು.
ಈ ಬಾರಿ ಲೋಕಸಭೆಗೆ ನಿಂತ ಎಲ್ಲಾ ಅಭ್ಯರ್ಥಿಗಳನ್ನೂ ತಿರಸ್ಕರಿಸುತ್ತೇವೆ. ಮತಯಂತ್ರದಲ್ಲಿ ನೋಟಾ ಎಂಬ ಬಟನ್ ಒತ್ತುವುದರ ಮೂಲಕ ನಾವು ಶಾಶ್ವತ ನೀರಾವರಿಗಾಗಿ ಒತ್ತಾಯಿಸುತ್ತೇವೆ. ನಮ್ಮ ಗ್ರಾಮದಿಂದಲೇ ಪ್ರಾರಂಭವಾಗಲಿರುವ ಈ ಹೋರಾಟ ಬರಪೀಡಿತ ಜಿಲ್ಲೆಯಾದ್ಯಂತ ಹಬ್ಬಿದಲ್ಲಿ ಶಾಶ್ವತ ನೀರಾವರಿಗಾಗಿ ಹೋರಾಟ ಬಲಗೊಳ್ಳುತ್ತದೆ ಮತ್ತು ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಎಚ್ಚರಿಕೆಯಾಗುತ್ತದೆ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ನಾರಾಯಣಸ್ವಾಮಿ, ಜಿಲ್ಲಾ ಸಂಚಾಲಕ ಭಕ್ತರಹಳ್ಳಿ ಬೈರೇಗೌಡ, ನಂಜಪ್ಪ, ತಲದುಮ್ಮನಹಳ್ಳಿ ಗ್ರಾಮಸ್ಥರಾದ ಟಿ.ಬಚ್ಚೇಗೌಡ, ಚನ್ನೇಗೌಡ, ಮುನೇಗೌಡ, ಕೆಂಪಣ್ಣ, ಸೌಮ್ಯ, ದೇವರಾಜ್, ಶ್ರೀನಿವಾಸ್, ಮಂಜುನಾಥ್, ಲಕ್ಷ್ಮೀನಾರಾಯಣ್, ಕುಮಾರ್, ರವಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.