ರೇಷ್ಮೆ ಮತ್ತು ಹಾಲಿಗೆ ಪ್ರಸಿದ್ಧಿ ಪಡೆದಿರುವ ತಾಲ್ಲೂಕಿನ ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಶಿಕ್ಷಣ, ಸಾಮಾಜಿಕ, ವ್ಯವಹಾರಿಕ ಹಾಗೂ ಆಡಳಿತಾತ್ಮಕ ವಿಕಾಸಕ್ಕೆ ಅನೇಕ ಮಹನೀಯರು ಕಾರಣರಾಗಿದ್ದಾರೆ ಎಂದು ಐದನೇ ತಾಲ್ಲೂಕು ಸಾಹಿತ್ಯ ಸಮ್ಮೇಳದ ಸಮ್ಮೇಳನಾಧ್ಯಕ್ಷ ಎನ್.ಶಿವಣ್ಣ ತಿಳಿಸಿದರು.
ನಗರದ ವಾಸವಿ ಕಲ್ಯಾಣ ಮಂಟಪದ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಬುಧವಾರ ನಡೆದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನ ಹಾಗೂ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಈಗಲೂ ಯುವಕರು, ಚೇತನಾಶೀಲರು, ಉತ್ಸಾಹಿಗಳು, ಸಾಧಕರು, ಬದ್ಧತೆ ಉಳ್ಳವರು ನಾಡು, ನುಡಿ, ಜಲ, ಶಿಕ್ಷಣ, ಆರೋಗ್ಯ, ಕೃಷಿಗಳ ಅಭಿವೃದ್ಧಿ ಕಡೆ ಶ್ರಮಿಸುತ್ತಾ ತಾಲ್ಲೂಕಿಗೆ ಕೀರ್ತಿ ತರುತ್ತಿರುವುದು ಸಕಾರಾತ್ಮಕ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ತಾಲ್ಲೂಕಿನ ಒಂಭತ್ತು ಮಂದಿಯನ್ನು ಸನ್ಮಾನಿಸಲಾಯಿತು. ಡಿ.ವೆಂಕಟಟಾಚಲಪತಿರಾವ್(ನಿವೃತ್ತ ಶಿಕ್ಷಕ), ಎನ್.ಕೆ.ಗುರುರಾಜರಾವ್(ದಾಖಲೆ ರಕ್ತದಾನ ಶಿಬಿರಗಳ ರೂವಾರಿ), ಸ್ನೇಕ್ ನಾಗರಾಜ್(ಉರಗ ತಜ್ಞ, ಪರಿಸರ ಪ್ರೇಮಿ), ಎಸ್.ಕಲಾಧರ್(ಶಿಕ್ಷಕ, ಮಕ್ಕಳ ಪುಸ್ತಕಗಳ ಸಂಪಾದಕ), ಮುನಿರಾಜು(ಕ್ರೀಡಾ ತರಬೇತುದಾರ), ಭವಾನಿಸಿಂಗ್(ನಿವೃತ್ತ ಯೋಧ), ಮುರಳೀಕೃಷ್ಣ(ಪುಸ್ತಕ ಮಾರಾಟಗಾರ), ಕಾಚಹಳ್ಳಿ ರತ್ನಮ್ಮ(ಭಾರತಾಂಬೆ ಮಹಿಳಾ ರೈತಕೂಟದ ಅಧ್ಯಕ್ಷೆ), ನಾರಾಯಣದಾಸರಹಳ್ಳಿ ಟಿ.ಕೃಷ್ಣಪ್ಪ(ಪ್ರಗತಿಪರ ರೈತ).
ಕ.ಸಾ.ಪ ಜಿಲ್ಲಾ ಅಧ್ಯಕ್ಷ ವೈ.ಎಲ್.ಹನುಮಂತರಾವ್, ನಿಕಟಪೂರ್ವ ಸಮ್ಮೇಳಣಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ತಾಲ್ಲೂಕು ಅಧ್ಯಕ್ಷ ಕೃ.ನಾ.ಶ್ರೀನಿವಾಸಮೂರ್ತಿ, ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿಗಳಾದ ಅಮೃತಕುಮಾರ್, ಮಂಚನಬಲೆ ಶ್ರೀನಿವಾಸ್, ವಿ.ಕೃಷ್ಣ, ಮಂಜುನಾಥ್, ಅನಂತಕೃಷ್ಣ, ಗುರುರಾಜರಾವ್ ಮತ್ತಿತರರು ಹಾಜರಿದ್ದರು.