Home News ತಾಲ್ಲೂಕು ಮಟ್ಟದ ಯುವಜನಮೇಳ

ತಾಲ್ಲೂಕು ಮಟ್ಟದ ಯುವಜನಮೇಳ

0

ಗ್ರಾಮಗಳಲ್ಲಿರುವ ಮೌಖಿಕ ಜನಪದ ಸಾಹಿತ್ಯದ ದಾಖಲಾತಿ ಹಾಗೂ ಕಲಾವಿದರ ಗುರುತಿಸುವಿಕೆಯ ಕಾರ್ಯ ನಡೆಯಬೇಕಿದೆ ಎಂದು ಸಾಹಿತಿ ಹಾಗೂ ಕಲಾವಿದ ಕೆ.ರವಿಕುಮಾರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿಯ ಬಯಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅಪ್ಪೇಗೌಡನಹಳ್ಳಿ ಶ್ರೀರಾಮ ಯುವಕರ ಸಂಘದ ಸಹಯೋಗದಲ್ಲಿ ನಡೆದ ತಾಲ್ಲೂಕು ಮಟ್ಟದ ಯುವಜನಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗುತ್ತಿದ್ದ ಮೌಖಿಕ ಜನಪದ ಗೀತೆಗಳು, ಲಾವಣಿಗಳು, ಪದಗಳು ಈಗ ಮರೆಯಾಗುವ ಮುನ್ನ ದಾಖಲಿಸಬೇಕಿದೆ. ಈ ಅಮೂಲ್ಯ ಸಾಹಿತ್ಯದ ವಾರಸುದಾರರಾದ ಜನಪದ ಕಲಾವಿದರನ್ನು ಗೌರವಿಸುವ ಸುಸಂಪ್ರದಾಯ ಗ್ರಾಮ ಹಾಗೂ ತಾಲ್ಲೂಕು ಮಟ್ಟದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಭಾವಗೀತೆ, ಲಾವಣಿ, ರಂಗಗೀತೆ, ಏಕಪಾತ್ರಾಭಿನಯ, ಗೀಗಿ ಪದ, ಜಾನಪದ ಗೀತೆ, ಭಜನೆ, ಕೋಲಾಟ, ಜಾನಪದ ನೃತ್ಯ, ಡೊಳ್ಳುಕುಣಿತ, ವೀರಗಾಸೆ ಕುಣಿತ, ಚರ್ಮವಾದ್ಯ, ಸೋಬಾನೆ ಪದ, ರಾಗಿ ಬೀಸುವ ಪದ ಮುಂತಾದ ಸ್ಪರ್ಧೆಗಳು ಯುವಕ ಮತ್ತು ಯುವತಿಯರಿಗೆ ಪ್ರತ್ಯೇಕವಾಗಿ ನಡೆಸಲಾಯಿತು. ವಿಜೇತರಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ತಾಲ್ಲೂಕು ಪಂಚಾಯತಿ ಸದಸ್ಯ ವೆಂಕಟೇಶ್, ಹಂಡಿಗನಾಳ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಾರದಮ್ಮ ನಾಗರಾಜ್, ಸದಸ್ಯರಾದ ಸಿ.ಉಮಾ ಚನ್ನೇಗೌಡ. ಎ.ಎಂ.ತ್ಯಾಗರಾಜ, ಕಲಾವಿದರಾದ ನಾಮದೇವ್, ವೀರಪ್ಪ, ಪ್ರಕಾಶ್ ಮತ್ತಿತರರು ಹಾಜರಿದ್ದರು.