ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರ ಕಾರ್ಯವೈಖರಿಯನ್ನು ಖಂಡಿಸಿ ನಗರದ ೫ ನೇ ವಾರ್ಡಿನ ಸದಸ್ಯ ಪಿ.ಕೆ.ಕಿಷನ್(ನಂದು) ನಗರಸಭೆ ಕಾರ್ಯಾಲಯಕ್ಕೆ ಗುರುವಾರ ಮದ್ಯಾಹ್ನ ಬೀಗ ಜಡಿದು ಪ್ರತಿಭಟಿಸಿದರು.
ಕಳೆದ ಒಂದು ವರ್ಷದಿಂದ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಕೆಲಸ ಕಾರ್ಯಗಳಾಗುತ್ತಿಲ್ಲ. ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಜನತೆಗೆ ಯಾವೊಂದು ಸಣ್ಣ ಕೆಲಸವನ್ನು ಮಾಡಲಾಗದ ಸ್ಥಿತಿಗೆ ನಗರಸಭೆ ಸದಸ್ಯರು ಬಂದಿಳಿದಿದ್ದೇವೆ.
ನಗರಸಭೆ ವ್ಯಾಪ್ತಿಯ ಬಡ ಜನತೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿಯೋ ಅಥವ ಮಕ್ಕಳ ಮದುವೆಗಾಗಿಯೋ ಮನೆ ಮಾರಾಟ ಮಾಡಬೇಕಾದ ಸ್ಥಿತಿ ಬಂದಾಗ ನಮಗೆ ಖಾತೆ ಮಾಡಿಕೊಡಿ ಎಂದು ಬಂದರೆ ಖಾತೆ ಮಾಡಿಕೊಡಲು ಆಗುತ್ತಿಲ್ಲ. ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರು ಕಚೇರಿಗೆ ಬಂದು ಕಚೇರಿಯಲ್ಲಿ ಕುಳಿತು ಕಾಲ ಹರಣ ಮಾಡುವ ಬದಲಿಗೆ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರೋಪಾಯ ಕಂಡುಹಿಡಿಯಬೇಕು.
ಸಾರ್ವಜನಿಕ ಕೆಲಸ ಕಾರ್ಯಗಳು ಮಾಡಬೇಕಾದ ಸರ್ಕಾರಿ ಕಚೇರಿಗಳಿಂದ ಜನತೆಗೆ ಏನೂ ಮಾಡಲು ಆಗುವುದಿಲ್ಲ ಎಂದಾದರೆ ನಗರಸಭೆ ಏಕೆ ಬೇಕು. ಜನಪ್ರತಿನಿಧಿಗಳು ಏಕೆ ಬೇಕು. ಈ ಬಗ್ಗೆ ಕೂಡಲೇ ಕ್ರಮ ಜರುಗಿಸಿ ನಗರಸಭೆಯಲ್ಲಿ ನಾಗರಿಕರಿಗೆ ಸುಲಭವಾಗಿ ಕೆಲಸ ಕಾರ್ಯಗಳು ಆಗುವಂತೆ ಆಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಗರಸಭೆ ಕಾರ್ಯಾಲಯದ ಮುಂಭಾಗ ಇಡೀ ವಾರ್ಡಿನ ಜನತೆಯನ್ನು ಕರೆತಂದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.