ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಗುಟ್ಟದ ಮೇಲಿರುವ ಭೂನೀಳಾ ಸಮೇತ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ನಾಲ್ಕನೇ ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಬ್ಯಾಟರಾಯಸ್ವಾಮಿ ಸೇವಾ ಸಮಿತಿ ವತಿಯಿಂದ ವಿಶೇಷ ಪೂಜಾ ಮಹೋತ್ಸವವನ್ನು ಆಯೋಜಿಸಲಾಗಿತ್ತು.
ಸುಮಾರು ಸಾವಿರ ವರ್ಷಗಳಿಗೂ ಹಳೆಯದಾದ ವಿಶಾಲವಾದ ಗುಟ್ಟದ ಮೇಲೆ ನಿರ್ಮಾಣಗೊಂಡಿರುವ ದೇವಾಲಯ, ಅದರ ಬಲ ಬದಿಯಲ್ಲಿ ಕಲ್ಯಾಣಿ, ಅದರ ಮಧ್ಯೆ ಸುಂದರವಾದ ಮಂಟಪವಿದೆ. ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯವು ವಿಶಾಲವಾದ ಪ್ರಾಕಾರ, ಗರ್ಭಗುಡಿ, ಅರ್ಧಮಂಟಪ, ಮುಖಮಂಟಪ ಹೊಂದಿದ್ದು, ಚೋಳರು ಹಾಗೂ ಹೊಯ್ಸಳರ ಕಾಲದಲ್ಲೂ ಅವರ ಕಲಾ ಪ್ರಕಾರದಲ್ಲಿ ನಿರ್ಮಾಣ ಕಂಡಿದ್ದು, ಅದರ ಅಂದ ಚಂದ ವೈಭವ ಬೆರಗು ಮೂಡಿಸುತ್ತದೆ.
ದೇವಾಲಯವು ವಿಶಾಲವಾದ ಗುಟ್ಟದ ಮೇಲೆ ನೆಲೆಸಿದ್ದು, ಸುತ್ತಲೂ ಹಸಿರ ಹೊದಿಕೆ ಆವರಿಸಿದೆ. ದೇವಾಲಯದ ಜಮೀನಿನಲ್ಲಿ ಬೆಳೆದ ಗಿಡ ಮರಗಳ ಹಸಿರು ದೇವಾಲಯವನ್ನು ಸುತ್ತುವರೆದಿದ್ದು ಆಕರ್ಷಣೀಯವಾಗಿದೆ.
ಇಲ್ಲಿ ಅನಾದಿಕಾಲದಿಂದಲೂ ನಾಯಕ ಸಮುದಾಯಕ್ಕೆ ಸೇರಿದವರೆ ಪೂಜೆ ನಡೆಸಿಕೊಂಡು ಬಂದಿರುವುದು ವಿಶೇಷ. ಶ್ರಾವಣ ಶನಿವಾರ ಭೂನೀಳಾ ಸಮೇತ ಬ್ಯಾಟರಾಯಸ್ವಾಮಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದಲ್ಲಿ ದೇವರ ಅನುಗ್ರಹವಾಗುವುದೆಂಬ ನಂಬಿಕೆಯಿಂದ ತಾಲ್ಲೂಕು ಹಾಗೂ ನೆರೆಯ ತಾಲ್ಲೂಕುಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಶ್ರೀ ಬ್ಯಾಟರಾಯಸ್ವಾಮಿ ಸೇವಾ ಸಮಿತಿ ವತಿಯಿಂದ ಭಕ್ತರಿಗೆ ಪ್ರಸಾದವನ್ನು ವಿನಿಯೋಗಿಸಲಾಯಿತು.
ಧರ್ಮದರ್ಶಿಗಳಾದ ದಾಮೋದರ್, ಎಸ್.ಶ್ರೀನಿವಾಸ್, ತಾಳಂಕಿ ಕುಟುಂಬದವರು, ಚಿಕ್ಕಗಂಗಪ್ಪನವರ ಕುಟುಂಬದವರು, ಬಿ.ಬೈರೇಗೌಡ, ಎ.ಶೇಷಪ್ಪ, ಡಿ.ಎ.ಅಶ್ವತ್ಥನಾರಾಯಣ್, ಬಿ.ಎನ್.ಕೃಷ್ಣಯ್ಯ, ಎನ್.ದೇವರಾಜ್, ಪಿ.ಎಂ.ಪುಟ್ಟರಾಜು, ಎಸ್.ಎಂ.ಮಂಜುನಾಥ್, ಎಂ.ಸಿ.ಜಗದೀಶ್, ಸಿ.ಆರ್.ಲಕ್ಷ್ಮಣಮೂರ್ತಿ, ಎಚ್.ಎನ್.ಬೈರೇಗೌಡ, ಎಸ್.ಶ್ರೀನಿವಾಸ್ ಹಾಜರಿದ್ದರು.