ನಗರದಲ್ಲಿ ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ಇಡಲಾಗಿದ್ದ ನಾಮಫಲಕಗಳು ಹಾಗೂ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿದ್ದ ಫುಟ್ಪಾತ್ ವ್ಯಾಪಾರಿಗಳನ್ನು ನಗರ ಠಾಣೆ ಪೊಲೀಸರು ಸೋಮವಾರ ತೆರವುಗೊಳಿಸಿದರು.
ನಗರದ ಬಸ್ ನಿಲ್ದಾಣದಿಂದ ದಿಬ್ಬೂರಹಳ್ಳಿಗೆ ಸಂಪರ್ಕ ಕಲ್ಪಿಸುವ ಪ್ರವಾಸಿ ಮಂದಿರ ರಸ್ತೆಯ ಇಕ್ಕೆಲಗಳಲ್ಲಿ ರಸ್ತೆಯ ಸುಗಮ ಸಂಚಾರಕ್ಕೆ ಅನುಕೂಲ ಮಾಡುವ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಒಂದೆರಡು ದಿನಗಳ ಹಿಂದೆಯೇ ಅಂಗಡಿಗಳವರಿಗೆ ಮಾಹಿತಿ ನೀಡಿ ರಸ್ತೆಯ ಮೇಲೆ ಅಂಗಡಿ ಸಾಮಾನುಗಳು ಇಡಬಾರದೆಂದು ತಿಳಿಸಿದ್ದರು.
ಸೋಮವಾರ ಫುಟ್ಪಾತ್ ತೆರವು ಕಾಮಗಾರಿಗೆ ಚಾಲನೆ ನೀಡಿದ ನಗರಠಾಣೆ ಪೊಲೀಸರು ಬಸ್ ನಿಲ್ದಾಣದಿಂದ ಪ್ರಥಮದರ್ಜೆ ಕಾಲೇಜಿನವರೆಗಿನ ಫುಟ್ ಪಾತ್ ಮೇಲಿನ ಅಂಗಡಿ ಮುಂಗಟ್ಟು ಹಾಗೂ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ನಾಗರಿಕರಲ್ಲಿ ಮನವಿ ಮಾಡಿದರು.
ನಗರಠಾಣೆ ಪಿಎಸ್ಸೈ ಲಿಯಾಖತ್ ಮಾತನಾಡಿ, ನಗರದ ಮುಖ್ಯರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುವುದು ಮತ್ತು ಬಹುತೇಕ ಅಂಗಡಿಗಳವರು ತಮ್ಮ ಅಂಗಡಿ ಸರಕನ್ನು ಅಂಗಡಿಯಿಂದ ಹೊರಗಡೆ ರಸ್ತೆಯಲ್ಲಿ ಹಾಕುವುದರಿಂದ ನಗರದ ಮುಖ್ಯರಸ್ತೆಗಳಲ್ಲಿ ಸಂಚರಿಸುವುದು ಕಷ್ಟಕರವಾಗುತ್ತದೆ. ಈ ಬಗ್ಗೆ ಹಲವಾರು ಭಾರಿ ನಗರಸಭೆಗೆ ಮನವಿ ಮಾಡಲಾಗಿತ್ತಾದರೂ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ ಹಾಗಾಗಿ ನಮ್ಮದೇ ಸಿಬ್ಬಂದಿಯೊಂದಿಗೆ ಫುಟ್ಪಾತ್ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿ ಯಾವುದೇ ನಾಮಫಲಕಗಳನ್ನು ಇಡದೇ ಪಾದಚಾರಿಗಳು ಸಂಚರಿಸಲು ಅಂಗಡಿ ಮಾಲೀಕರು ಸೇರಿದಂತೆ ಸಾರ್ವಜನಿಕರು ಸಹಕರಿಸಬೇಕು ಎಂದರು.