ಗರ್ಭಿಣಿ, ಬಾಣಂತಿಯರು ಹಾಗೂ ಕಿಶೋರಿಯರಿಗೆ ಪೌಷ್ಠಿಕಾಂಶ ಅಗತ್ಯವಿರುವುದರಿಂದ ಆಹಾರದಲ್ಲಿ ಸಮತೋಲನ ಇರಬೇಕು. ಇಂದು ಬಹುತೇಕರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಕ್ಕೆ ಪೌಷ್ಠಿಕ ಆಹಾರ ಸೇವಿಸದಿರುವುದೇ ಕಾರಣ ಎಂದು ಜಂಗಮಕೋಟೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಂಬಿಕಾ ತಿಳಿಸಿದರು.

ದಿನನಿತ್ಯದ ನಮ್ಮ ಆಹಾರದಲ್ಲಿ ಮೊಳಕೆ ಕಾಳು, ಹಸಿ ತರಕಾರಿ, ಸೊಪ್ಪು ಬಳಕೆ ಮಾಡಬೇಕು. ಆರೋಗ್ಯವಂತರಾಗಿರಲು ಹಣ್ಣು, ಹಾಲು, ಮೊಟ್ಟೆಗಳನ್ನು ಉಪಯೋಗಿಸಬೇಕು. ಜೊತೆಗೆ ಶುದ್ಧವಾದ ಕುಡಿಯುವ ನೀರಿನ ಕಡೆಗೂ ಗಮನ ಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿವಿಧ ರೀತಿಯ ಕಾಳುಗಳು, ಸೊಪ್ಪು, ತರಕಾರಿಗಳ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಗಿತ್ತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ ಶಿವಕುಮಾರ್, ಅಂಗನವಾಡಿ ಕಾರ್ಯಕರ್ತೆಯರಾದ ಭವ್ಯ, ಕನಕರತ್ನಮ್ಮ, ಆಸ್ಪತ್ರೆಯ ದಾದಿ ನಕ್ಷತ್ರ ಮೇರಿ, ಆಶಾ ಕಾರ್ಯಕರ್ತೆಯರಾದ ಸುಶೀಲಾ, ಪ್ರಭಾವತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.