Home News ಪ್ಯಾರಾಸೆಟಮಾಲ್ ಖರೀದಿಸುವವರ ಮಾಹಿತಿ ಸಂಗ್ರಹಿಸಿ

ಪ್ಯಾರಾಸೆಟಮಾಲ್ ಖರೀದಿಸುವವರ ಮಾಹಿತಿ ಸಂಗ್ರಹಿಸಿ

0

ಔಷಧಿ ಅಂಗಡಿಗಳಿಗೆ ಮಾತ್ರೆ ಕೊಳ್ಳಲು ಬರುವವರಿಗೆ ಅರಿವು ಮೂಡಿಸಿ. ವೈದ್ಯರ ಚೀಟಿ ಇಲ್ಲದೆ ಔಷಧಿಗಳನ್ನು ಮಾರಬೇಡಿ ಎಂದು ಉಪ ಔಷಧ ನಿಯಂತ್ರಕ ಸುರೇಶ್ ಕೆಂಪಯ್ಯ ತಿಳಿಸಿದರು.

 ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರ ನೇತೃತ್ವದಲ್ಲಿ ನಡೆದ ತಾಲ್ಲೂಕು ಔಷಧಿ ವ್ಯಾಪಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

 ಈ ಹಿಂದೆ ಕೆಲವಾರು ಔಷಧಿಗಳಿಗೆ ವಿನಾಯಿತಿ ಇತ್ತು. ಆದರೆ ಕೊರೊನಾ ತಡೆಗಟ್ಟುವಲ್ಲಿ ನಾವೂ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕೆಲವೊಂದು ನಿರ್ದೇಶನಗಳನ್ನು ಕೊಟ್ಟಿದೆ ಅವನ್ನು ನಾವುಗಳು ಪಾಲಿಸಲೇಬೇಕು. ಮುಂದಿನ ಎರಡು ವಾರಗಳು ಕೊರೊನಾ ತಡೆಗಟ್ಟುವಲ್ಲಿ ಬಹಳ ಮುಖ್ಯವಾಗುತ್ತವೆ.

 ಕೆಮ್ಮು, ನೆಗಡಿ, ಜ್ವರ ಎಂದು ಬರುವವರನ್ನೆಲ್ಲಾ ಆದಷ್ಟೂ ವೈದ್ಯರ ಬಳಿಯೇ ಕಳುಹಿಸಿ. ವೈದ್ಯರ ಚೀಟಿ ಬಹು ಮುಖ್ಯ ಎಂದು ಅರಿವು ಮೂಡಿಸಿ. ಆದರೂ ಪಾರಾಸೆಟಮಾಲ್ ಮಾತ್ರೆ ಅಥವಾ ಅದರ ಸಂಯೋಜಿತ ಮಾತ್ರೆಯನ್ನು, ಆಸ್ತಮಾ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಔಷಧಿ ಖರೀದಿಸಿದರೆ ಅವರ ಹೆಸರು ಮೊಬೈಲ್ ನಂಬರನ್ನು ಪಡೆಯಬೇಕು. ಮೊಬೈಲ್ ನಲ್ಲಿರುವ ಆಪ್ ನಲ್ಲಿ ಮಾತ್ರೆ ಖರಿದಿಸುವವರ ಹೆಸರು ಮೊಬೈಲ್ ಸಂಖ್ಯೆಯನ್ನು ತಕ್ಷಣ ನಮೂದಿಸಬೇಕು. ಆ ಮಾಹಿತಿ ಔಷಧ ನಿಯಂತ್ರಕರಿಗೆ, ಆರೋಗ್ಯಾಧಿಕಾರಿಗಳಿಗೆ ದೊರಕುತ್ತದೆ ಎಂದು ಹೇಳಿದರು.

 ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ನಮ್ಮ ತಾಲ್ಲೂಕಿನ ನೋಡಲ್ ಅಧಿಕಾರಿ ಡಾ.ವಾಣಿ ಅವರು ಔಷಧಿ ಅಂಗಡಿಗಳವರು ಆಪ್ ನಲ್ಲಿ ನಮೂದಿಸಿರುವ ಮಾಹಿತಿಯನ್ನು ಪಡೆಯುತ್ತಾರೆ. ಪ್ರತಿ ದಿನ ಮಾಹಿತಿ ಪಡೆದು ಯಾವ ಪ್ರದೇಶದಲ್ಲಿ ಹೆಚ್ಚು ಮಾತ್ರೆ ಪಡೆದಿದ್ದಾರೋ ಅಲ್ಲಿಗೆ ಹೋಗಿ ಚಿಕಿತ್ಸೆ ನೀಡಲು ಇದರಿಂದ ಅನುಕೂಲವಾಗುತ್ತದೆ. ಸೋಂಕನ್ನು ತಡೆಗಟ್ಟಲು ಇದು ಕೂಡ ಒಂದು ಮಾರ್ಗ ಎಂದು ಹೇಳಿದರು.

 ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ವಿನೋದ್ ಕಾಂಬ್ಳಿ, ವೈದ್ಯಾಧಿಕಾರಿ ಡಾ.ವಾಣಿ, ನೋಡಲ್ ಅಧಿಕಾರಿ ಡಾ.ಮಂಜುನಾಥ್, ಔಷಧಿ ವ್ಯಾಪಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ವಿ.ರ್ಸ್.ವಿ.ಗುಪ್ತ, ರಮೇಶ್ ಬಾಬು, ಮಂಜುನಾಥ್, ಸುರೇಶ್ ಹಾಜರಿದ್ದರು.

error: Content is protected !!