ನಗರದ ಬಸ್ ನಿಲ್ದಾಣದಿಂದ ದಿಬ್ಬೂರಹಳ್ಳಿಗೆ ಸಂಪರ್ಕ ಕಲ್ಪಿಸುವ ಪ್ರವಾಸಿ ಮಂದಿರ ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿಗಳು ಸಂಚರಿಸುವ ಫುಟ್ ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ನಗರಸಭೆ ಹಾಗೂ ನಗರಠಾಣೆ ಪೊಲೀಸ್ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು.
ಫುಟ್ಪಾತ್ ವ್ಯಾಪಾರಸ್ಥರ ತೆರವು ಕಾಮಗಾರಿಗೆ ಚಾಲನೆ ನೀಡಿದ ನಗರಸಭೆ ಸಿಬ್ಬಂದಿ ಹಾಗೂ ನಗರಠಾಣೆ ಪೊಲೀಸರು ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿವರೆಗಿನ ಫುಟ್ ಪಾತ್ ಮೇಲಿನ ಅಂಗಡಿ ಮುಂಗಟ್ಟು ಹಾಗೂ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದವರಿಗೆ ದಂಡ ವಿಧಿಸಿದರು.
ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಮಾತನಾಡಿ, ನಗರದ ಮುಖ್ಯರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುವುದು ಹಾಗೂ ಬಹುತೇಕ ಅಂಗಡಿಗಳವರು ತಮ್ಮ ಅಂಗಡಿ ಸರಕನ್ನು ಅಂಗಡಿಯಿಂದ ಹೊರಗಡೆ ರಸ್ತೆಯಲ್ಲಿ ಹಾಕುವುದರಿಂದ ನಗರದ ಮುಖ್ಯರಸ್ತೆಗಳಲ್ಲಿ ಸಂಚರಿಸುವುದು ಕಷ್ಟಕರವಾಗುತ್ತದೆ. ಈ ಬಗ್ಗೆ ನಾಗರಿಕರು ಹಲವಾರು ಭಾರಿ ನಗರಸಭೆಗೆ ಮನವಿ ಮಾಡಿದ ಹಿನ್ನಲೆಯಲ್ಲಿ ಸಿಬ್ಬಂದಿಯೊಂದಿಗೆ ಫುಟ್ಪಾತ್ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿ ಯಾವುದೇ ನಾಮಫಲಕ ಹಾಗೂ ಅಂಗಡಿ ಸರಕುಗಳನ್ನು ಇಡದೇ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಠಾಣೆ ಪಿಎಸ್ಸೈ ಅವಿನಾಶ್ ವೀರ್, ಎಎಸ್ಸೈಗಳಾದ ಕೃಷ್ಣಪ್ಪ, ವೆಂಕಟರಾಮ್, ನಗರಸಭೆ ಆರೋಗ್ಯ ನಿರೀಕ್ಷಕ ಆಂಜಿನಪ್ಪ ಹಾಜರಿದ್ದರು.