Home News ಬಿಳಿ ಜೋಳ ಬೆಳೆದು ಮೇವಿನ ಕೊರತೆ ನೀಗಿಸಿಕೊಂಡ ರೈತ

ಬಿಳಿ ಜೋಳ ಬೆಳೆದು ಮೇವಿನ ಕೊರತೆ ನೀಗಿಸಿಕೊಂಡ ರೈತ

0

ಒಣಭೂಮಿಗೆ ಸೂಕ್ತ ಎಂದು ಪ್ರಾಯೋಗಿಕವಾಗಿ ತಾಲ್ಲೂಕಿನ ಕೃಷಿ ಇಲಾಖೆ ವಿತರಿಸಿದ್ದ ಬಿಳಿ ಜೋಳ ಉತ್ತಮವಾಗಿ ಬೆಳೆದಿದ್ದು, ನೀರಿನ ಅಭಾವದಿಂದ ಜಾನುವಾರುಗಳಿಗೆ ಮೇವಿನ ತೊಂದರೆಯುಂಟಾಗಿರುವ ಕಾಲದಲ್ಲಿ ಪರ್ಯಾಯವಾಗಿ ಆಶಾಕಿರಣವಾಗಿದೆ.
ತಾಲ್ಲೂಕಿನ ಬೂದಾಳದ ರೈತ ರಾಮಾಂಜಿನಪ್ಪ ಕೃಷಿ ಅಧಿಕಾರಿಗಳಿಂದ ಪಡೆದಿದ್ದ ಒಂದು ಕೆಜಿ ಬಿಳಿ ಜೋಳವನ್ನು ತಮ್ಮ 10 ಗುಂಟೆ ಜಮೀನಿನಲ್ಲಿ ಹಾಕಿದ್ದರು. ಸುಮಾರು ಎರಡು ತಿಂಗಳಿನಿಂದ ಮಳೆಯ ಹಿನ್ನಡೆಯೊಂದಿಗೂ ಜೋಳದ ಬೆಳೆ ಚೆನ್ನಾಗಿ ಬಂದಿದ್ದು, ಜಾನುವಾರುಗಳಿಗೆ ಮೇವಿನ ಕೊರತೆಯನ್ನು ನೀಗಿಸಿದೆ. ಅವರದ್ದೇ ಜಮೀನಿನಲ್ಲಿ ಅವರು ಚೆಲ್ಲಿದ್ದ ಸಾಂಪ್ರದಾಯಿಕ ಮೇವು ನೀರಿಲ್ಲದೆ ಸೊರಗಿದೆ.

ಬಿಳಿ ಜೋಳದ ತೆನೆ
ಬಿಳಿ ಜೋಳದ ತೆನೆ

ಉತ್ತರ ಕರ್ನಾಟಕದ ಪ್ರಮುಖ ಆಹಾರ ಬೆಳೆ ಬಿಳಿ ಜೋಳದ ಬಿತ್ತನೆಗೆ ಸಾಕಷ್ಟು ಮಳೆ ಬೇಕಾಗಿಲ್ಲ. ಭೂಮಿ ಹದವಿದ್ದರೆ ಸಾಕು. ಬಿತ್ತನೆ ನಂತರ ಒಂದು ಮಳೆ ಬಂದರೂ ಸಾಕು. ಚಳಿಗಾಲದಲ್ಲಿ ಬೀಳುವ ಇಬ್ಬನಿಗೂ ಬೆಳೆ ಕೈಗೆ ಬರುತ್ತದೆ. ಇದಲ್ಲದೇ ಈ ಬೆಳೆಗೆ ಅತಿಯಾದ ಖರ್ಚೂ ಇರುವುದಿಲ್ಲ. ಹೆಚ್ಚಿನ ಗೊಬ್ಬರ ಮತ್ತು ಔಷಧದ ಅವಶ್ಯಕತೆ ಇಲ್ಲ.
‘ಕೃಷಿ ಅಧಿಕಾರಿಗಳು ಬಿಳಿ ಜೋಳ ಒಣ ಭೂಮಿಗೆ ಸೂಕ್ತ. ಕಡಿಮೆ ನೀರಿದ್ದರೂ ಒಳ್ಳೆಯ ಬೆಳೆಯಾಗುತ್ತದೆ ಎಂದು ಹೇಳಿ ಕೊಟ್ಟಿದ್ದರು. ಆದರೆ ನಾನು ಕೇವಲ 10 ಗುಂಟೆಯಲ್ಲಿ ಮಾತ್ರ ಅದನ್ನು ಚೆಲ್ಲಿದ್ದೆ. ಉಳಿದ ಕಡೆ ನಮ್ಮ ಎಂದಿನ ಮೇವಿನ ತಳಿಯನ್ನೇ ಹಾಕಿದ್ದೆ. ಆದರೆ ಮಳೆ ಕೈಕೊಟ್ಟಿದ್ದರಿಂದ ಈಗ ಬಿಳಿ ಜೋಳದ ಬೆಳೆಯೇ ಕಾಪಾಡುತ್ತಿದೆ. ಬಿಳಿ ಜೋಳವನ್ನು ನಾವು ಅಡುಗೆಗೆ ಬಳಸಬಹುದಾಗಿದೆ. ಕಡಿಮೆ ನೀರಿನಲ್ಲಿ ಬೆಳೆಯುವ ತಳಿಗಳನ್ನೇ ನಾವು ಇನ್ನು ಮುಂದೆ ಹೆಚ್ಚಾಗಿ ಅವಲಂಬಿಸಬೇಕು’ ಎಂದು ರೈತ ಬೂದಾಳ ರಾಮಾಂಜಿನಪ್ಪ ತಿಳಿಸಿದರು.

error: Content is protected !!