Home News ಬೆಳೆಸಾಲ ಹಾಗು ಕೈ ಸಾಲದ ಬಾದೆಯಿಂದ ಕೇಶವಪುರ ಗ್ರಾಮದ ರೈತನ ಆತ್ಮಹತ್ಯೆ

ಬೆಳೆಸಾಲ ಹಾಗು ಕೈ ಸಾಲದ ಬಾದೆಯಿಂದ ಕೇಶವಪುರ ಗ್ರಾಮದ ರೈತನ ಆತ್ಮಹತ್ಯೆ

0

ಬೆಳೆಸಾಲ ಹಾಗು ಕೈ ಸಾಲದ ಬಾದೆಯಿಂದ ಬೇಸತ್ತ ಕೇಶವಪುರ ಗ್ರಾಮದ ಕೃಷಿಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯತಿಯ ಕೇಶವಪುರ ಗ್ರಾಮದ ಅಂಬರೀಷ್ (೩೫) ಮೃತ ದುರ್ದೈವಿ.
ಘಟನೆಯ ಹಿನ್ನಲೆ :
ಎಳನೀರು ವ್ಯಾಪಾರ ಮಾಡಿಕೊಂಡಿದ್ದ ಮೃತ ಅಂಬರೀಷನಿಗೆ ಯಾವುದೇ ಸ್ವಂತ ಜಮೀನು ಇರಲಿಲ್ಲ. ಜೀವನಾಧಾರಕ್ಕೆಂದು ಬೇರೆಯವರ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಕಾಯಕ ನಡೆಸುತ್ತಿದ್ದ.
ಟೊಮ್ಯಾಟೊ, ಬದನೆಕಾಯಿ ಸೇರಿದಂತೆ ರೇಷ್ಮೆ ಸೊಪ್ಪು ಬೆಳೆದು ಮಾರಾಟ ಮಾಡುತ್ತಿದ್ದ. ಆದರೆ ಈ ಬಾರಿ ಬೆಳೆದಿದ್ದ ಟೊಮ್ಯಾಟೊ ಹಾಗೂ ರೇಷ್ಮೆ ಧಾರಣೆ ತೀವ್ರ ಕುಸಿತ ಕಂಡ ಕಾರಣ, ಹಾಕಿದ ಬಂಡವಾಳ ಬರುವುದಿಲ್ಲವೇನೋ ಎಂಬ ಆತಂಕದಲ್ಲಿ ಅಂಬರೀಷ ಶನಿವಾರ ಬೆಳಗ್ಗೆ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ವಿಚಾರ ತಿಳಿದ ಪೋಷಕರು ಹಾಗು ಗ್ರಾಮಸ್ಥರು ಚಿಕಿತ್ಸೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಬೆಳಗ್ಗೆ ಮೃತ ಪಟ್ಟಿದ್ದಾನೆ.

17aug5
ಮೃತ ಅಂಬರೀಷನ ಸಾವಿನ ವಿಷಯ ತಿಳಿದು ಸ್ಥಳಕ್ಕೆ ಶಾಸಕ ಎಂ.ರಾಜಣ್ಣ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ರೈತನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಾಸಕ ಎಂ.ರಾಜಣ್ಣ, ಮಾಜಿ ಶಾಸಕ ವಿ.ಮುನಿಯಪ್ಪ, ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಅಮರೇಶ, ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಹಂಡಿಗನಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಯಪ್ಪ ಮತ್ತಿತರರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಇಡೀ ಕುಟುಂಬಕ್ಕೆ ಆಸರೆಯಂತಿದ್ದ ಮೃತ ಅಂಬರೀಷನ ಸಾವಿನ ವಿಷಯ ತಿಳಿದ ಪತ್ನಿ ಹಾಗು ಸಂಬಂಧಿಕರ ನೋವು ಒಂದೆಡೆಯಾದರೆ ತಮ್ಮ ತಂದೆ ಮೃತ ಪಟ್ಟಿದ್ದಾರೆ ಎಂಬ ಅರಿವೇ ಇಲ್ಲದ ಇಬ್ಬರು ಪುಟಾಣಿ ಮಕ್ಕಳ ಮುಗ್ಧತೆ ಕಂಡ ಗ್ರಾಮಸ್ಥರ ಕಣ್ಣುಗಳು ತೇವವಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು.

‘ತನಗೆ ಯಾವುದೇ ಸ್ವಂತ ಜಮೀನಿಲ್ಲದಿದ್ದರೂ ಸಹ ಸ್ವಾಭಿಮಾನಿಯಾಗಿ ಜೀವಿಸಬೇಕು ಹಾಗು ಕುಟುಂಬದ ನಿರ್ವಹಣೆಗಾಗಿ ಬೇರೆ ತೋಟಗಳನ್ನು ಗುತ್ತಿಗೆ ಪಡೆದು ಜೀವನ ನಡೆಸುತ್ತಿದ್ದ ಅಂಬರೀಷನ ಆತ್ಮಹತ್ಯೆಯ ನಿರ್ದಾರ ತುಂಬಾ ನೋವು ತಂದಿದೆ. ಮೃತನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಯಾವುದಾದರೂ ವಸತಿ ಶಾಲೆಗೆ ದಾಖಲಿಸಿ ಉಚಿತ ಶಿಕ್ಷಣ ಕೊಡಿಸುವಂತಹ ವ್ಯವಸ್ಥೆ ಮಾಡಲಾಗುವುದು. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮೃತನ ಕುಟುಂಬಕ್ಕೆ ಸೂಕ್ತಪರಿಹಾರ ಒದಗಿಸಲಾಗುವುದು’
–ಎಂ.ರಾಜಣ್ಣ. ಶಾಸಕರು.
‘ಬಯಲು ಸೀಮೆಯ ಈ ಭಾಗದಲ್ಲಿ ಪ್ರಕೃತಿಯ ಮುನಿಸಿನಿಂದಾಗಿ ಬರಗಾಲ ತಾಂಡವಾಡುತ್ತಿದ್ದು ಸ್ವಾಭಿಮಾನದಿಂದ ಬದುಕಬೇಕಾದ ರೈತ ಅಂಬರೀಷ ಆತ್ಮಹತ್ಯೆ ಮಾಡಿಕೊಂಡಿರುವುದು ದುರಂತದ ಸಂಗತಿಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮೃತ ರೈತನ ಕುಟುಂಬಕ್ಕೆ ಪರಿಹಾರ ವಿತರಣೆ ಮಾಡಿಸುವಂತಹ ಕೆಲಸ ಮಾಡಲಾಗುವುದು’
–ವಿ.ಮುನಿಯಪ್ಪ, ಮಾಜಿ ಸಚಿವ.
‘ಮೃತ ರೈತ ಅಂಬರೀಶನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ರೈತ ಬೆಳೆದಿರುವ ಹಿಪ್ಪುನೇರಳೆ, ಬದನೆಕಾಯಿ, ಮತ್ತು ಟಮೋಟೊ ಬೆಳೆಗಳನ್ನು ವೀಕ್ಷಣೆ ಮಾಡಿಕೊಂಡು ಬಂದಿದ್ದೇವೆ. ಮೃತ ಅಂಬರೀಶ ಸೇರಿದಂತೆ ಆತನ ತಂದೆಯ ಹೆಸರಿನಲ್ಲಿ ಯಾವುದೇ ಜಮೀನಿಲ್ಲ. ಹಾಗಾಗಿ ಖಾಸಗಿ ವ್ಯಕ್ತಿಗಳಿಂದ ಸುಮಾರು ೩ ಲಕ್ಷ ರೂಗಳು ಕೈ ಸಾಲ ಮಾಡಿಕೊಂಡಿರುವ ಬಗ್ಗೆ ಕುಟುಂಬಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿಯವರು ಸಹ ಬಂದು ಪರಿಶೀಲನೆ ನಡೆಸಿದ್ದು ಅಧಿಕೃತವಾಗಿ ರೈತನ ಆತ್ಮಹತ್ಯೆ ಎಂದು ಘೋಷಣೆಯಾದಲ್ಲಿ ಮಾತ್ರ ಸರ್ಕಾರದ ನಿಯಮದ ಪ್ರಕಾರ ಪರಿಹಾರ ನೀಡಲು ಅವಕಾಶವಿರುತ್ತದೆ’
–ಜಿ.ಎ.ನಾರಾಯಣಸ್ವಾಮಿ, ತಹಸೀಲ್ದಾರ್, ಶಿಡ್ಲಘಟ್ಟ

error: Content is protected !!