Home News ಬೆಳ್ಳೂಟಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಗೆ ಗುದ್ದಲಿಪೂಜೆ

ಬೆಳ್ಳೂಟಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಗೆ ಗುದ್ದಲಿಪೂಜೆ

0

ತಾಲ್ಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ಶುಕ್ರವಾರ ಬಸ್ ತಂಗುದಾಣದ ಉದ್ಘಾಟನೆ, ಕಾಂಕ್ರೀಟ್ ರಸ್ತೆಗೆ ಗುದ್ದಲಿಪೂಜೆ, ಗ್ರಾಮದ ಸ್ವಚ್ಛತೆಕಾರ್ಯ ಹಾಗೂ ಹೊಸವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಸಾಮಾಜಿಕವಾಗಿ, ಆರ್ಥಿಕವಾಗಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗಾಂಧೀಜಿ ಅವರ ಆಶಯದಂತೆ ಸುಭದ್ರ ಗ್ರಾಮಗಳನ್ನು ಕಟ್ಟಬೇಕಿದೆ. ಈ ನಿಟ್ಟಿನಲ್ಲಿ ಬೆಳ್ಳೂಟಿಯಲ್ಲಿ ಮೊದಲ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ಪ್ರತಿಯೊಂದು ಗ್ರಾಮದಲ್ಲೂ ಗ್ರಾಮದ ಏಳಿಗೆಯನ್ನು ಬಯಸುವ ಯುವಪಡೆ ಮುಂದೆಬರಬೇಕು. ರಾಜಕೀಯ, ಧರ್ಮ, ಜಾತಿ, ಮೇಲು ಕೀಳೆಂಬ ಭಾವನೆಗಳಲ್ಲು ಪಕ್ಕಕ್ಕಿಟ್ಟು ಗ್ರಾಮದ ಅಭಿವೃದ್ಧಿಗೆ ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಶ್ರಮಿಸಬೇಕು. ಈ ಕೆಲಸದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಪಾತ್ರವೂ ಸಾಕಷ್ಟಿದೆ. ಈ ಆಧುನಿಕ ಯುಗದಲ್ಲೂ ಸ್ವಚ್ಛತೆಯನ್ನು ಕಡೆಗಣಿಸಿದ್ದಕ್ಕೆ ಚೀನಾ ತೆರುತ್ತಿರುವೆ ಬೆಲೆ ನಮಗೆಲ್ಲ ಪಾಠವಾಗಿದೆ. ಎಚ್.ಎನ್ ವ್ಯಾಲಿ ನೀರು ನಮ್ಮ ತಾಲ್ಲೂಕಿನ ಕೆರೆಗಳಿಗೂ ಬರಲಿದೆ. ರೈತರು ಕಡಿಮೆ ನೀರಿನಿಂದ ಬೆಳೆಯಬಹುದಾದ ಬೆಳೆಗಳನ್ನು ವೈಜ್ಞಾನಿಕವಾಗಿ ಬೆಳೆಯಬೇಕಿದೆ ಎಂದರು.
ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆಳ್ಳೂಟಿ ಸಂತೋಷ್ ಮಾತನಾಡಿ, ಸ್ವಚ್ಛತೆಯ ವಿಷಯವನ್ನು ಹಾಸ್ಯಾಸ್ಪದವಾಗಿ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡತನ ಪ್ರತಿಯೊಬ್ಬರಲ್ಲೂ ಇರುತ್ತದೆ. ಅದು ಸಾಮಾಜವನ್ನು ಕುಟುಂಬದ ಭಾಗವಾಗಿ ನೋಡುವ ಮನಸ್ಸಿನ ಬಡತನವಾಗಬಾರದು. ಗ್ರಾಮದ ರಸ್ತೆ, ಡೈರಿ ಆವರಣ, ಶಾಲಾ ಆವರಣ, ಮನೆಯ ಬಳಿಯ ಚರಂಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಯಾರೋ ಗೆದ್ದ ಗ್ರಾಮ ಪಂಚಾಯಿತಿ ಮೆಂಬರು ಬಂದು ಸ್ವಚ್ಛಗೊಳಿಸಲಿ ಎಂಬ ಮನೋಭಾವ ಬಿಡಬೇಕು. ಎಲ್ಲರ ಸಹಭಾಗಿತ್ವದಲ್ಲಿ ಮಾತ್ರ ಸ್ವಚ್ಛ ಸುಂದರ ಗ್ರಾಮೀಣ ಪರಿಸರ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಳ್ಳೂಟಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ಈಚೆಗೆ ಆನೂರು ಗ್ರಾಮ ಪಂಚಾಯಿತಿಗೆ ಸರ್ಕಾರದಿಂದ ಸ್ವಚ್ಛತೆಗಾಗಿ ಬಂದ ಪ್ರಶಸ್ತಿ ಹಣದಲ್ಲಿ ಗ್ರಾಮಗಳ ಸ್ವಚ್ಛತೆಗಾಗಿ ಟ್ರಾಕ್ಟರನ್ನು ಖರೀದಿಸಿದ್ದು, ಅದರ ಲೋಕಾರ್ಪಣೆಯನ್ನು ಸಹ ಮಾಡಲಾಯಿತು.
ಹಾಪ್ ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಸದಸ್ಯರಾದ ಗಂಗರೆಡ್ಡಿ, ವರಲಕ್ಷ್ಮಿ ಸಂತೋಷ್, ಪಿಡಿಒ ಅರುಣಕುಮಾರಿ, ಎ.ಪಿ.ಎಂ.ಸಿ ಉಪಾಧ್ಯಕ್ಷ ವೆಂಕಟೇಶ್, ಶ್ರೀನಿವಾಸ್ ಹಾಜರಿದ್ದರು.

error: Content is protected !!