Home News ಬೈರಸಾಗರ ಕೆರೆಗೆ ಬಾಗಿನ ಅರ್ಪಣೆ

ಬೈರಸಾಗರ ಕೆರೆಗೆ ಬಾಗಿನ ಅರ್ಪಣೆ

0

ಜಿಲ್ಲೆಯಲ್ಲಿ ಹಿಂದುಳಿದ ಬರಪೀಡಿತ ಪ್ರದೇಶವೆಂದು ಗುರುತಿಸಿಕೊಂಡಿದ್ದ ದಿಬ್ಬೂರಹಳ್ಳಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿದೆ. ಸುಮಾರು ೮ ವರ್ಷಗಳಿಂದ ನೀರಿರದೆ ಒಣಗಿದ್ದ ಗ್ರಾಮದ ಬೈರಸಾಗರ ಕೆರೆ ಕೋಡಿ ಹರಿದಿದ್ದು ಸಂತಸ ಹಾಗೂ ಸಂಭ್ರಮಗೊಂಡ ದಿಬ್ಬೂರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೆರೆಗೆ ಪೂಜೆ ಸಲ್ಲಿಸಿದ್ದಾರೆ.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಂಗಳವಾರ ಕೆರೆಗೆ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರದಲ್ಲಿ ಸಮೃದ್ಧವಾಗಿ ಮಳೆಯಾಗಿ ಕೆರೆ-ಕುಂಟೆಗಳು ಭರ್ತಿಯಾಗಿ ಜನಸಾಮಾನ್ಯರು ಹಾಗೂ ರೈತರು ಸುಖಶಾಂತಿಯಿಂದ ಬದುಕುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಅವರು ಹೇಳಿದರು.
ಈಗಾಗಲೇ ತುಂಬಿರುವ ಕೆರೆಯ ನೀರು ವ್ಯರ್ಥವಾಗಿ ಹರಿಯುತ್ತಿದ್ದನ್ನು ಕಂಡು ಅಸಮಾಧಾನಗೊಂಡು ಕೂಡಲೇ ಕೆರೆಯ ನೀರು ಪೋಲಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಣ್ಣನೀರಾವರಿ ಸಹಾಯಕ ಕಾರ್ಯಪಾಲಕ ಅಭಿಯಂತರ ವೀರಪ್ಪ ಹಾಗೂ ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ರವಿ, ವಿ.ಸುಭ್ರಮಣಿ, ಆರ್.ಶ್ರೀನಿವಾಸ್, ಎನ್.ಮುನಿಯಪ್ಪ, ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ, ಉಪಾಧ್ಯಕ್ಷೆ ಮಮತಾ, ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್, ಗೋಪಿ, ಪ್ರಸನ್ನ, ದ್ಯಾವಪ್ಪ, ಶ್ರೀನಿವಾಸ್ರೆಡ್ಡಿ, ಗೋವಿಂದ್ರಾಜು, ಸಮೀಉಲ್ಲಾ, ಗಫೂರ್, ಮಧುಸೂದನ್, ಡಿ.ಪಿ.ನಾಗರಾಜ್, ಅಶ್ವತ್ಥರೆಡ್ಡಿ, ದಿಬ್ಬೂರಹಳ್ಳಿ ಪೋಲಿಸ್ಠಾಣೆಯ ಪಿ.ಎಸ್.ಐ ರಾಘವೇಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಾಕ್ಸ್್…
ಕೊಳವೆಬಾವಿಗಳಿಗೆ ಮರುಜೀವ : ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಒಣಗಿರುವ ಕೊಳವೆಬಾವಿಗಳು ಇದೀಗ ಮರುಜೀವ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಬೈರಸಾಗರ ಕೆರೆ ಕೋಡಿ ಹರಿಯುತ್ತಿರುವುದರಿಂದ ಅಂತರ್ಜಲಮಟ್ಟ ವೃದ್ಧಿಗೊಂಡು ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಯುವ ಸಾಧ್ಯತೆ ಗೋಚರಿಸುತ್ತಿದೆ.

error: Content is protected !!
Exit mobile version