Home News ಮುಖ್ಯಮಂತ್ರಿಗಳ ರದ್ದಾದ ಪ್ರವಾಸ : ರೈತರ ಆಕ್ರೋಷ

ಮುಖ್ಯಮಂತ್ರಿಗಳ ರದ್ದಾದ ಪ್ರವಾಸ : ರೈತರ ಆಕ್ರೋಷ

0

ಬರ ಅಧ್ಯಯನ ಎಂಬುದು ಕೇವಲ ಬೂಟಾಟಿಕೆಯಾಗಿದೆ. ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ಕಾಳಜಿಯಿಲ್ಲ ಎಂದು ಹಸಿರು ಸೇನೆ ಮತ್ತು ರೈತ ಸಂಘದ ಸದಸ್ಯರು ಆರೋಪಿಸಿದರು.
ತಾಲ್ಲೂಕಿನ ಎಚ್.ಕ್ರಾಸ್ ಬಳಿ ಬರ ಅಧ್ಯಯನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸ ರದ್ದಾದ ಹಿನ್ನೆಲೆಯಲ್ಲಿ ಮಂಗಳವಾರ ಕೆಲ ಕಾಲ ರಸ್ತೆ ತಡೆ ನಡೆಸಿದ ರೈತ ಸಂಘದ ಸದಸ್ಯರು ತಮ್ಮ ಆಕ್ರೋಷ ವ್ಯಕ್ತಪಡಿಸಿದರು.
ಇತ್ತೀಚೆಗೆ ತಾಲ್ಲೂಕಿನ ನಾರಾಯಣದಾಸರಹಳ್ಳಿ ಗ್ರಾಮಕ್ಕೆ ಭೇಟಿ ನೀಡದೆ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ರೋಷನ್ಬೇಗ್ ನೇತೃತ್ವದ ಬರ ಅಧ್ಯಯನ ತಂಡ ಕಾಟಾಚಾರಕ್ಕೆ ಬರ ಅಧ್ಯಯನ ನಡೆಸಿದ್ದರು. ಈ ದಿನ ಮುಖ್ಯಮಂತ್ರಿಗಳು ಕೇವಲ ಕೋಲಾರಕ್ಕೆ ಭೇಟಿ ನೀಡಿ ಅಲ್ಲಿಂದ ಹಾಗೆಯೇ ಹೋಗುವ ಮೂಲಕ ಈ ಭಾಗದ ಜನರನ್ನು ಕಡೆಗಣಿಸಿದ್ದಾರೆ.
ರೈತರು, ಹೆಂಗಸರು, ಕೂಲಿ ಕಾರ್ಮಿಕರು, ಸುತ್ತಮುತ್ತಲ ಗ್ರಾಮಸ್ಥರು ಹಲವಾರು ಮಂದಿ ಕೂಲಿಗೂ ಹೋಗದೇ, ತಮ್ಮ ಕಾಯಕವನ್ನು ಬಿಟ್ಟು ಮುಖ್ಯಮಂತ್ರಿಗಳಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಲೆಂದು ಕಾದಿದ್ದರು. ಈ ಭಾಗದ ಜನರಿಗೆ ಕುಡಿಯಲು ನೀರಿಲ್ಲ. ಶಾಶ್ವತ ನೀರಾವರಿಗೆ ಸಂಬಂಧಿಸಿದಂತೆ ಹೋರಾಟ ನಡೆಸಿದ್ದರೂ ಆ ಬಗ್ಗೆ ಕ್ರಮ ಕೈಗೊಳ್ಳದೆ, ಕಾಟಾಚಾರದ ಅಧ್ಯಯನಕ್ಕಾಗಿ ಜನರ ಸಮಯ ಮತ್ತು ಹಣವನ್ನು ಪೋಲು ಮಾಡುತ್ತಿದ್ದಾರೆ. ಮೇ 5 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳ ಆಪ್ತ ಅಧಿಕಾರಿಗಳಿಂದ ತಿಳಿದುಬಂದಿದೆ. ಆ ದಿನವೂ ಕಾಟಾಚಾರಕ್ಕೆ ಬಂದು ಹೋದಲ್ಲಿ ರೈತ ಸಂಘದಿಂದ ಉಗ್ರ ಪ್ರತಿಭಟನೆಯನ್ನು ನಡೆಸುವುದಾಗಿ ತಿಳಿಸಿದ್ದಾರೆ.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಮುನಿಕೆಂಪಣ್ಣ, ಬಾಲಮುರಳಿಕೃಷ್ಣ, ಪ್ರತೀಶ್, ರಮೇಶ್, ಹುಸೇನ್ಸಾಬ್, ವೆಂಕಟರೆಡ್ಡಿ, ಆಂಜಿನಪ್ಪ, ಎಸ್.ಎನ್.ಮಾರಪ್ಪ, ಡಿ.ವಿ.ನಾರಾಯಣಸ್ವಾಮಿ, ಮಂಜುನಾಥ್, ವೀರಪ್ಪರೆಡ್ಡಿ, ಅಮರನಾಥ್, ಕೃಷ್ಣರೆಡ್ಡಿ, ವೆಂಕಟರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!