ತಾಲ್ಲೂಕಿನ ಮೇಲೂರು ಹಾಗೂ ಸುತ್ತಮುತ್ತ ಬೇರೆಡೆಯಿಂದ ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳನ್ನು ತರಿಸಿ ಇಲ್ಲಿನ ಯುವಕರ ಮೂಲಕ ಮಾರಾಟ ಮಾಡುತ್ತಿರುವ ದಂಧೆ ನಡೆಯುತ್ತಿರುವ ಅನುಮಾನವಿದ್ದು ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮೇಲೂರು ಗ್ರಾಮ ಪಂಚಾಯಿತಿಯಿಂದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರನ್ನು ದಾಖಲಿಸಲಾಗಿದೆ.
ತಾಲ್ಲೂಕಿನ ಸುಶಿಕ್ಷತ ಹಾಗೂ ಪ್ರಗತಿಪರ ಗ್ರಾಮ ಎಂದೇ ಖ್ಯಾತಿ ಪಡೆದಿರುವ ಮೇಲೂರು ಗ್ರಾಮದಲ್ಲಿ ಇತ್ತೀಚೆಗೆ ಕೆಲ ಯುವಕರು ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿರುವುದು ಪೋಷಕರು ಹಾಗೂ ನಾಗರಿಕರಲ್ಲಿ ಆತಂಕವನ್ನುಂಟು ಮಾಡಿದೆ.
ಬೇರೆಡೆಯಿಂದ ಇಲ್ಲಿಗೆ ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳನ್ನು ತರಿಸಿ ಇಲ್ಲಿನ ಯುವಕರನ್ನು ಬಳಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಿಗೆ ಸರಬರಾಜು ಮಾಡುತ್ತಿರುವ ಶಂಕೆಯಿದೆ. ಸಾಲದೆಂಬಂತೆ ಗ್ರಾಮದ ಶಾಲಾ ಆವರಣದಲ್ಲಿ ಮದ್ಯ, ಗಾಂಜಾ ಹಾಗೂ ಇತರ ಮಾದಕ ವಸ್ತುಗಳ ಬಳಕೆ ಮಾಡಿ ಆವರಣವನ್ನು ಕಲುಷಿತಗೊಳಿಸುತ್ತಿರುವುದರಿಂದ ಶಾಲೆಗೆ ಹೋಗುವ ಮಕ್ಕಳಲ್ಲಿ ಭಯದ ವಾತಾವರಣ ಕೂಡ ನಿರ್ಮಾಣವಾಗಿದೆ.
ಕಳೆದ ತಿಂಗಳಿನಲ್ಲಿ ಮೇಲೂರು ಗ್ರಾಮದಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಶಾಲಾ ಆವರಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಬೆಳಗ್ಗೆ ಶಾಲೆಗೆ ಬಂದರೆ ಆವರಣದಲ್ಲಿ ಮದ್ಯದ ಬಾಟಲಿ ಮುಂತಾದ ವಸ್ತುಗಳು ಬಿದ್ದಿರುತ್ತವೆ, ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ದೂರಿದ್ದರು.
ಕೂಡಲೇ ಪೊಲೀಸ್ ಇಲಾಖೆ ಕಾನೂನು ರೀತಿಯ ಕ್ರಮ ಜರುಗಿಸುವ ಮೂಲಕ ಗ್ರಾಮದಲ್ಲಿ ಶಾಂತಿಯ ವಾತಾವರಣ ನಿರ್ಮಾಣ ಮಾಡಿಕೊಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಲ್.ಜಮುನಾ ಧರ್ಮೇಂದ್ರ ಮತ್ತು ಪಿಡಿಓ ಕೆ.ವಿ.ಶಾರದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.