ತಾಲ್ಲೂಕಿನ ಜಂಗಮಕೋಟೆ ಹೋಬಳಿ ಅಮರಾವತಿಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಟ್ಟಡವನ್ನು ನಿರ್ಮಿಸಬಾರದೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಶುಕ್ರವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿ ಸುಂಡರಹಳ್ಳಿ ಗ್ರಾಮದ ಸರ್ವೆ ನಂ 1 ರಲ್ಲಿ 102 ಎಕರೆ 27 ಗುಂಟೆ ಜಮೀನಿನ ಪ್ರದೇಶದಲ್ಲಿ ಮಂಜೂರಾಗಿದ್ದ ಜಾಗವನ್ನು ಅಲ್ಲಿನ ಭೂಮಾಫಿಯಾ ವ್ಯಕ್ತಿಗಳಿಗೆ ತೊಂದರೆಯಾಗುತ್ತದೆಂದು ದಿಡೀರನೆ ಏಕಾಏಕಿ ಸ್ಥಳವನ್ನು ಬದಲಿಸಿ ಅಮರಾವತಿ ಗ್ರಾಮದ ಸರ್ವೆ ನಂ 47 ರಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಸ್ಥಳ ನೀಡಿದ್ದಾರೆ. ಈ ಜಮೀನಿನಲ್ಲಿ 25 ಕೃಷಿ ಬಳಕೆಯ ಚೆಕ್ ಡ್ಯಾಮ್ಗಳು, 30 ಕೊಳವೆ ಬಾವಿಗಳು, ಗೋಡಂಬಿ, ಮಾವು, ನೀಲಗಿರಿ ಹಾಗೂ ಇತರೆ ಬೆಳೆಗಳಿವೆ.
ಹಲವು ರೈತರು ಫಾರಂ ನಂ 53ರ ಅಡಿಯಲ್ಲಿ ಅನುಭವದ ಆಧಾರದ ಮೇಲೆ ಭೂಮಿಯ ಮಂಜೂರಾತಿಗಾಗಿ ಅರ್ಜಿಗಳನ್ನು ಸಲ್ಲಿಸಿಕೊಂಡಿರುತ್ತಾರೆ. ಸುಮಾರು 50 ವರ್ಷಗಳಿಂದ ಕೆಲವರು ಸಾಗುವಳಿ ಮಾಡಿಕೊಂಡಿದ್ದು, ಅದರಲ್ಲಿ ಕೆಲವರಿಗೆ ಫಹಣಿಯಲ್ಲಿ ಹೆಸರು ಕೂಡ ಬಂದಿರುತ್ತದೆ. ತಕ್ಷಣ ಅಮರಾವರಿ ಗ್ರಾಮದ ಈ ಸ್ಥಳವನ್ನು ಕೈಬಿಟ್ಟು ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಸಾಗುವಳಿ ಚೀಟಿಗಳನ್ನು ನೀಡಬೇಕು. ಹಿಂದೆ ಮಂಜೂರಾಗಿದ್ದ ಕಡೆಯಲ್ಲೇ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಟ್ಟಡಕ್ಕೆ ಸ್ಥಳ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಜಿಲ್ಲಾ ಸಂಚಾಲಕ ಜೆ.ಎಸ್.ವೆಂಕಟಸ್ವಾಮಿ, ಪ್ರತೀಶ್, ರಾಮಾಂಜಿನಪ್ಪ, ಮಾರಪ್ಪ, ರಮೇಶ್, ಅನುಸೂಯಮ್ಮ, ನಾಗರಾಜ, ಮಂಜುನಾಥ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.