ವಿಶಿಷ್ಠಾದ್ವೈತ ತತ್ವದ ಮುಖಾಂತರ ಸಮಾಜದಲ್ಲಿನ ಸಾಮಾನ್ಯ ವರ್ಗದ ಜನರಿಗೆ ಆಧ್ಯಾತ್ಮಿಕ ಮಾರ್ಗವನ್ನು ತೋರಿಸಿ, ಮಾನವರು ಸನ್ಮಾರ್ಗದಲ್ಲಿ ನಡೆಯುವಂತೆ ಭೋದನೆ ಮಾಡಿದ ರಾಮಾನುಜಾಚಾರ್ಯರು ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಶ್ರೀ ವೈಷ್ಣವ ಅಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಕೋದಂಡಪ್ಪ ಹೇಳಿದರು.
ತಾಲ್ಲೂಕಿನ ಆನೆಮಡಗು ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ಶ್ರೀ ವೈಷ್ಣವ ಅಭಿವೃದ್ಧಿ ಸೇವಾ ಸಂಘದ ವತಿಯಿಂದ ಆಯೋಜನೆ ಮಾಡಲಾಗಿದ್ದ ರಾಮಾನುಜಾಚಾರ್ಯರ ೯೯೯ ನೇ ತಿರುನಕ್ಷತ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ಅವರು ಮಾತನಾಡಿದರು.
ರಾಮಾನುಜಾಚಾರ್ಯರು ಎಲ್ಲಾ ಪಂಥದವರು, ಪಂಗಡಗಳವರು ಒಪ್ಪುವಂತಹ ಸಂದೇಶಗಳನ್ನು ಸಮಾಜಕ್ಕೆ ನೀಡಿದ್ದಾರೆ, ಭಕ್ತಿಯ ಆಂದೋಲನವನ್ನು ಪ್ರಚುರ ಪಡಿಸುವಲ್ಲಿ ಚೈತನ್ಯಪ್ರಭು, ವಲ್ಲಭಾಚಾರ್ಯರು, ಕಬೀರ, ರಮಾನಂದರ ಪಂಥಗಳು, ಪ್ರಮುಖ ಪಾತ್ರವನ್ನು ವಹಿಸಿದ್ದವು, ರಾಮಾನುಜರನ್ನು ರಾಷ್ಟ್ರಕವಿ ಕುವೆಂಪು ಅವರು ರಚನೆ ಮಾಡಿರುವ ನಾಡಗೀತೆಯಲ್ಲಿ ಪ್ರಚುರ ಪಡಿಸಿರುವುದನ್ನು ಕಂಡಾಗ ಅವರು, ಮುಖ್ಯವಾಗಿ ಅವರು ಮಾನವ ಧರ್ಮಕ್ಕೆ ಸೇರಿದವರು ಎನ್ನುವುದು ಸತ್ಯಸಂಗತಿಯಾಗಿದೆ. ಮಾನವ ಕುಲವನ್ನು ಸನ್ಮಾರ್ಗದ ಕಡೆಗೆ ನಡೆಸುವ ನಿಟ್ಟಿನಲ್ಲಿ ಅವರು ಅನೇಕ ಬೋದನೆಗಳನ್ನು ಮಾಡಿದ್ದಾರೆ. ದೀನದಲಿತರ ಉದ್ದಾರ, ಮೇಲುಕೀಳು ಎಂಬ ಭಾವನೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಅವರ ವಿಶಿಷ್ಟವಾದ ಕಾರ್ಯವೈಖರಿಯು ಮಾನವ ಕುಲಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶೇಷವಾದ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ಹೋಮಗಳನ್ನು ಮಾಡಲಾಗಿತ್ತು, ಪಂಚಲೋಹದ ರಾಮಾನುಜಾಚಾರ್ಯರ ಪ್ರತಿಮೆಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಯದರ್ಶಿ ಶ್ರೀನಿವಾಸಾಚಾರ್ಯ, ಬಾಬು, ಜಿ.ಎಸ್.ತ್ಯಾಗರಾಜ್, ಜಿ.ಟಿ. ಚಕ್ರಪಾಣಿ, ಹರಿಪ್ರಸಾದ್, ಜಿ.ಟಿ. ಕಾವ್ಯ, ಲಕ್ಷ್ಮಮ್ಮ, ಜಿಲ್ಲಾ ಪಂಚಾಯತಿ ಸದಸ್ಯ ಡಾ.ಜಯರಾಮರೆಡ್ಡಿ ಮತ್ತಿತರರು ಪೂಜಾಕಾರ್ಯಕ್ರಮದಲ್ಲಿ ಭಾಗಹಿಸಿದ್ದರು.