ಕ್ಷೇತ್ರದಲ್ಲಿ ಶಾಶ್ವತವಾದ ಅಭಿವೃದ್ಧಿ ಕಾರ್ಯ ಮಾಡಲು ಮಾಜಿ ಶಾಸಕ ವಿ.ಮುನಿಯಪ್ಪ ಅಡ್ಡಗಾಲಾಗಿದ್ದಾರೆ. ಕಳೆದ 25 ವರ್ಷಗಳಲ್ಲಿ ಅವರೂ ಅಭಿವೃದ್ಧಿ ಕಾರ್ಯ ಮಾಡದೇ ನಮಗೂ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಶಾಸಕ ಎಂ.ರಾಜಣ್ಣ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೆಎಸ್ಆರ್ಟಿಸಿ ಡಿಪೋಗಾಗಿ ಹನುಮಂತಪುರದ ಬಳಿ ಜಮೀನು ಗುರುತಿಸಿದ್ದಕ್ಕೆ ನ್ಯಾಯಾಲಯದ ಮೂಲಕ ಸ್ಟೇ ತಂದರು, ರೇಷ್ಮೆ ಕಾಲೇಜನ್ನು ಚಿಂತಾಮಣಿಗೆ ನೀಡಿದರು, ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಮಾಜಿ ಶಾಸಕ ದಿ.ಮುನಿಶಾಮಪ್ಪ ಜಮೀನು ನಿಗದಿಪಡಿಸಿದ್ದರು, ಅದನ್ನು ಅವರು ಮಾಡಗೊಡಲಿಲ್ಲ ಎಂದು ಹೇಳಿದರು.
ರಾಷ್ಟ್ರೀಯ ಪಕ್ಷಗಳು ಬಯಲು ಸೀಮೆಯ ಜ್ವಲಂತ ಸಮಸ್ಯೆಯಾದ ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಾ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಮತದಾರರು ದಡ್ಡರಲ್ಲ. ಈ ಬಾರಿಯ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಕ್ಷೇತ್ರದ ಜನ ನೀರಿಗಾಗಿ ಸತತ ಹೋರಾಟ ನಡೆಸಿದ್ದರೂ ರಾಜ್ಯ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದಾಗ ಆ ಪಕ್ಷಕ್ಕೆ ಹೇಗೆ ತಾನೆ ಬೆಂಬಲಿಸುತ್ತಾರೆ.
ಹಾವು ಮುಂಗಸಿಯಂತಿದ್ದ ಕ್ಷೇತ್ರದ ಮಾಜಿ ಸಚಿವರು ಹಾಗು ಸಂಸದರು ಇದೀಗ ಚುನಾವಣೆ ಬಂದಾಗ ಮೇಲ್ನೋಟಕ್ಕೆ ಒಂದಾಗಿರುವ ಹಾಗೆ ನಟಿಸಿದ ಮಾತ್ರಕ್ಕೆ ಕ್ಷೇತ್ರದ ಜನತೆ ಮರಳಾಗುವುದಿಲ್ಲ. ಕ್ಷೇತ್ರದ ಜನತೆ ಬಹಳ ಬುದ್ದಿವಂತರಾಗಿದ್ದು ಕಾಂಗ್ರೆಸ್ ನಾಯಕರಿಬ್ಬರೂ ತಮ್ಮ ತಮ್ಮ ಅಸ್ಥಿತ್ವ ಉಳಿಸಿಕೊಳ್ಳುವ ಸಲುವಾಗಿ ಬಿನ್ನಮತ ಬಿಟ್ಟು ಒಂದಾಗಿದ್ದೇವೆ ಎಂದು ಹೇಳಿದರೂ, ಇವರ ಮೊಸಳೆ ಕಣ್ಣೀರಿಗೆ ಮೋಸ ಹೋಗುವಷ್ಟು ಜನ ದಡ್ಡರಲ್ಲ. ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಅತಿ ಹೆಚ್ಚು ಜೆಡಿಎಸ್ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿ ಮಾಡಲು ಪಕ್ಷದ ಮುಖಂಡರು ಸೇರಿದಂತೆ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದರು.
ಕಳೆದ ಐದು ವರ್ಷಗಳ ಹಿಂದೆ ಜಂಗಮಕೋಟೆ ಜಿಲ್ಲಾ ಪಂಚಾಯಿತಿ ಹಾಗು ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಹೋದ ಸದಸ್ಯರು ಈವರೆಗೂ ಒಮ್ಮೆಯೂ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ ಹಾಗೂ ಯಾವುದೇ ಅಭಿವೃದ್ದಿ ಕಾರ್ಯ ಮಾಡಿಲ್ಲ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಸದಸ್ಯರು ಕೈಗೊಂಡ ಅಭಿವೃದ್ಧಿ ಕಾರ್ಯ ಶೂನ್ಯ. ಜೆಡಿಎಸ್ ಪಕ್ಷದಿಂದ ಆಯ್ಕೆಯಾದ ಸದಸ್ಯರು ತಮಗೆ ಬಂದ ಅನುದಾನವನ್ನು ಸಂಪೂರ್ಣ ಸದ್ಭಳಕೆ ಮಾಡಿಕೊಂಡು ಶಾಶ್ವತ ಕೆಲಸಗಳನ್ನು ಮಾಡಿದ್ದಾರೆ ಎಂದರು.
ತಾವು ಶಾಸಕರಾದ ಮೇಲೆ ಕ್ಷೇತ್ರದಾಧ್ಯಂತ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಉತ್ತಮ ರಸ್ತೆ ಹಾಗು ಅಗತ್ಯವಿರುವ ಎಲ್ಲಾ ಮೂಲಭೂತ ಸವಲತ್ತುಗಳನ್ನು ಪಕ್ಷಾತೀತವಾಗಿ ಮಾಡಿದ್ದು, ಮಾಜಿ ಶಾಸಕ ದಿವಂಗತ ಎಸ್.ಮುನಿಶಾಮಪ್ಪನವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಈ ಭಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಜನರು ಬೆಂಬಲಿಸಲಿದ್ದಾರೆ ಎಂದರು.
ಜೆಡಿಎಸ್ ಪಕ್ಷದ ಅಬ್ಲೂಡು ಕ್ಷೇತ್ರದ ಅಭ್ಯರ್ಥಿ ಬಂಕ್ ಮುನಿಯಪ್ಪ, ಹಂಡಿಗನಾಳ ತಾಲ್ಲೂಕು ಪಂಚಾಯತಿ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮೀನಾರಾಯಣ, ಮುಖಂಡರಾದ ಆರ್.ಎ.ಉಮೇಶ್, ಕೆ.ಮಂಜುನಾಥ್್, ಜಂಗಮಕೋಟೆ ಮಂಜುನಾಥ್, ಮುನಿರೆಡ್ಡಿ, ಅಫ್ಸರ್ ಪಾಷ, ರಹಮತ್ತುಲ್ಲ ಮತ್ತಿತರರು ಹಾಜರಿದ್ದರು.