ಕೊರೊನಾ ಭೀತಿಯಿಂದ ಮುಚ್ಚಲಾಗಿದ್ದ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಪುನಃ ತೆರೆಯುವಂತೆ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಆದೇಶವನ್ನು ಹೊರಡಿಸಿರುವ ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಟಿ.ಎಂ.ವಿಜಯ ಭಾಸ್ಕರ್ ರೇಷ್ಮೆ ಗೂಡು ಮಾರುಕಟ್ಟೆಯನ್ನು ನಿರ್ಬಂಧನೆ(ಲಾಕ್ ಡೌನ್)ಯಿಂದ ವಿನಾಯಿತಿ ನೀಡಿದ್ದಾರೆ.
ಸಾವಿರಾರು ಮಂದಿ ಒಂದೆಡೆ ಸೇರುವ ರೇಷ್ಮೆ ಗೂಡಿನ ಮಾರುಕಟ್ಟೆ ಅಸುರಕ್ಷಿತ ಪ್ರದೇಶವಾಗಿದೆ. ಒಬ್ಬ ಸೋಂಕಿತ ವ್ಯಕ್ತಿ ಬಂದರೂ ಇಡೀ ತಾಲ್ಲೂಕು ಹಾಗೂ ಜಿಲ್ಲೆಯಾದ್ಯಂತ ರೋಗ ಮಹಾಮಾರಿಯಂತೆ ಹಬ್ಬುತ್ತದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ರೇಷ್ಮೆ ಬೆಳೆಗಾರರು ನಮಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ರೀಲರುಗಳ ಬಳಿ ನೇರವಾಗಿ ಮಾರಾಟ ಮಾಡಲು ಹೋದರೆ ತೀರಾ ಕಡಿಮೆ ಹಣಕ್ಕೆ ಕೇಳುತ್ತಿದ್ದಾರೆ. ಕನಿಷ್ಟ ಮಾರುಕಟ್ಟೆ ಇದ್ದರೆ ನಮ್ಮ ಬೆಳೆಗೆ ಬೆಲೆ ಬರುತ್ತದೆ ಎನ್ನುತ್ತಾರೆ.

“ರೇಷ್ಮೆ ಗೂಡನ್ನು ಒಂದು ಕೆಜಿಗೆ 150 ರಿಂದ 200 ರೂವರೆಗೆ ಕೇಳುತ್ತಿದ್ದಾರೆ. ರೇಷ್ಮೆ ಬೆಳೆಗಾರರ ಸಂಕಷ್ಟವನ್ನು ನಮ್ಮ ರಾಜ್ಯ ಕಾರ್ಯದರ್ಶಿಯವರ ಗಮನಕ್ಕೆ ತಂದಿದ್ದೆವು. ಅವರು ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಮುಂದುವರೆಸುವಂತೆ ಆದೇಶಿಸಿದ್ದಾರೆ. ಮಾರುಕಟ್ಟೆಯಲ್ಲಿ ಸ್ವಚ್ಛತೆಯನ್ನು ಕಾಪಾಡಲು ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಜಿಲ್ಲಾಡಳಿತವನ್ನು ಕೋರಿದ್ದೇವೆ. ಮಾರುಕಟ್ಟೆಯನ್ನು ತೆರೆಯುವುದಕ್ಕಿಂತ ಮುಖ್ಯವಾಗಿ ರೀಲರುಗಳಿಗೆ ಸರ್ಕಾರ ಹಣದ ನೆರವನ್ನು ನೀಡಬೇಕು. ಆಗಷ್ಟೆ ರೈತರಿಗೆ ಅನುಕೂಲವಾಗುತ್ತದೆ.
ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಪ್ರವೇಶಿಸುವ ರೈತರು ಮತ್ತು ರೀಲರುಗಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಿ ಒಳಬಿಡಬೇಕು. ಮುಖಕ್ಕೆ ಮಾಸ್ಕ್ ಅಥವಾ ಬಟ್ಟೆಯನ್ನು ಕಟ್ಟಿರಬೇಕು. ರೇಷ್ಮೆ ಗೂಡುಗಳ ಲಾಟ್ ಗಳನ್ನು ಅಂತರ ಕಾಯ್ದುಕೊಳ್ಳುವಂತೆ ಹಾಕಿಸಬೇಕು. ಜನಸಂದಣಿ ಕಡಿಮೆ ಇರುವಂತೆ, ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ನಡೆದುಕೊಳ್ಳಬೇಕು. ಚೆಕ್ ಪೋಸ್ಟ್ ನಲ್ಲಿ ತಡೆಹಿಡಿದರೆ ಹೊರರಾಜ್ಯದ ರೇಷ್ಮೆ ಗೂಡುಗಳು ಬರುವುದಿಲ್ಲ. ಕೇವಲ ಜಿಲ್ಲೆಯ ರೈತರಿಗೆ ಸೀಮಿತವಾಗಿ ಮಾರುಕಟ್ಟೆ ನಡೆಯುತ್ತದೆ” ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕು ಸಿಲ್ಕ್ ರೀಲರ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್ ಅವರು ಈ ಬಗ್ಗೆ ಮಾತನಾಡಿ, “ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸಾವಿರಾರು ಮಂದಿ ಒಂದೆಡೆ ಸೇರುತ್ತಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಮನೆ ಬಿಟ್ಟು ಕದಲದಂತೆ ದೇಶದೆಲ್ಲೆಡೆ ಸಂದೇಶ ರವಾನಿಸಲಾಗಿದೆ. ಆದರೆ ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇದು ಏಕೆ ಅನ್ವಯವಾಗುತ್ತಿಲ್ಲ. ಶಿಡ್ಲಘಟ್ಟದಿಂದಲೇ ಕೊರೊನಾ ಎಲ್ಲೆಡೆ ವ್ಯಾಪಿಸಿದರೆ ಎಂಬ ಭಯ ಆತಂಕ ಕಾಡುತ್ತಿದೆ.
ಮಾರುಕಟ್ಟೆಯಲ್ಲಿ ಸ್ವಚ್ಛತೆಯಿಲ್ಲ. ಕಳೆದ ವಾರವೇ ತಾಲ್ಲೂಕು ಆರೋಗ್ಯಾಧಿಕಾರಿಗಳು ರೇಷ್ಮೆ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವವರಿಗೆ ಅನುಕೂಲವಾಗಲೆಂದು ಸ್ಯಾನಿಟೈಸರ್ ಗಳು, ಲಿಕ್ವಿಡ್ ಸೋಪ್, ಥರ್ಮಲ್ ಸ್ಕ್ಯಾನರ್ ಗಳು, ಬ್ಲೀಚಿಂಗ್ ಪೌಡರ್ ತರಿಸಿಡಬೇಕೆಂದು ಪತ್ರವನ್ನು ಉಪನಿರ್ದೇಶಕರಿಗೆ ನೀಡಿದ್ದರೂ ಯಾವ ಪ್ರಯೋಜನವೂ ಆಗಿಲ್ಲ. ಅಲ್ಲಿ ಕೈತೊಳೆಯಲು ನೀರಿನ ವ್ಯವಸ್ಥೆಯಿಲ್ಲ.
ಜಿಲ್ಲೆಯಲ್ಲಿ ಮೂರು ಕೊರೊನಾ ರೋಗಿಗಳಿರುವುದು ದೃಢಪಟ್ಟಿದೆ. ಏನಾದರೂ ತೊಂದರೆಯಾದರೆ ಯಾರು ಹೊಣೆ. ಆದ್ದರಿಂದ ರೇಷ್ಮೆ ಗೂಡಿನ ಮಾರುಕಟ್ಟೆ ಮುಚ್ಚುವುದು ಕ್ಷೇಮ. ರೈತರಿಗೆ ತೊಂದರೆ ಆಗುವುದನ್ನು ತಪ್ಪಿಸಲು ಸರ್ಕಾರವೇ ರೇಷ್ಮೆ ಗೂಡನ್ನು ಖರೀದಿಸಿ ವೇರ್ ಹೌಸ್ ನಲ್ಲಿಡಲಿ ಅಥವಾ ರೈತರೇ ಸ್ಟೀಮ್ ಕೊಟ್ಟು ಹುಳುವನ್ನು ಸಾಯಿಸಿ ಗೂಡನ್ನು ಎತ್ತಿಡಲಿ. ಹಲವು ಮಂದಿ ಒಂದೆಡೆ ಇರುವುದರಿಂದ ಮನೆಗಳಲ್ಲಿನ ರೇಷ್ಮೆ ಘಟಕಗಳನ್ನು ಕೂಡ ನಿಲ್ಲಿಸುವಂತೆ ಸೂಚಿಸಲಾಗುತ್ತಿದೆ. ನಮಗೂ ಖಚ್ಚಾ ರೇಷ್ಮೆ ಮಾರಲಾಗುತ್ತಿಲ್ಲ” ಎಂದು ತಿಳಿಸಿದರು.
ರೈತಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ಅವರು,”ಮಾರುಕಟ್ಟೆಯ ಒಳಗೆ 200 ಲಾಟ್ ಗಿಂತ ಹೆಚ್ಚು ಪ್ರವೇಶಿಸದಂತೆ ನಿರ್ಬಂಧ ವಿಧಿಸಲಿ. ಜನರುಊಬ್ಬರಿಂದೊಬ್ಬರು ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಿ. ಸ್ವಚ್ಛತೆಗೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡು ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ನಡೆಸಲಿ” ಎಂದು ಸಲಹೆ ನೀಡಿದರು.