ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಭಾನುವಾರ ರೇಷ್ಮೆ ಇಲಾಖೆಯ ಆಯುಕ್ತ ಸತೀಶ್ ನೇತೃತ್ವದಲ್ಲಿ ನಡೆದ ರೀಲರುಗಳ ಸಭೆಯಲ್ಲಿ ರೀಲರುಗಳ ನಡುವೆ ಮಾತಿನ ಚಕಮಕಿ ನಡೆಯಿತು.
ರೇಷ್ಮೆ ಉಪನಿರ್ದೇಶಕ ಎಂ.ಎನ್.ರತ್ನಯ್ಯಶೆಟ್ಟಿ ಸಭೆಗೆ ಔಪಚಾರಿಕವಾಗಿ ಸ್ವಾಗತ ಕೋರುತ್ತಿದ್ದಂತೆ, ರೀಲರ್ ಅಕ್ಮಲ್ ಪಾಷ, ‘ನಾನು ರೀಲರುಗಳ ಸಂಘದ ಅಧ್ಯಕ್ಷ. ನಿಮಗೆ ಜ್ಞಾನ ಇದೆಯಾ. ಸಭೆಯಲ್ಲಿ ಸ್ವಾಗತ ಕೋರುವಾಗ ನನಗೂ ಸ್ವಾಗತ ಕೋರಬೇಕು. ಇಲ್ಲದಿದ್ದರೆ ರೀಲರುಗಳು ನಿಮ್ಮ ಮುಖಕ್ಕೆ ಉಗಿಯುತ್ತಾರೆ’ ಎಂದು ಆಕ್ರೋಷ ವ್ಯಕ್ತಪಡಿಸುತ್ತಿದ್ದಂತೆ ಉಳಿದ ರೀಲರುಗಳು ಅಕ್ಮಲ್ ಪಾಷ ವಿರುದ್ಧ ತಿರುಗಿ ಬಿದ್ದರು.
‘ಮಾರುಕಟ್ಟೆಯಲ್ಲಿ ರೀಲರುಗಳ ಸಂಘವೇ ಇಲ್ಲ. ನೀನು ಅಧ್ಯಕ್ಷ ಹೇಗಾದೆ. ಸ್ವಘೋಷಿತ ಅಧ್ಯಕ್ಷ ಎನ್ನುತ್ತಾ ಅಧಿಕಾರಿಗಳನ್ನು ಕೆಟ್ಟದಾಗಿ ಮಾತನಾಡಿ ರೀಲರುಗಳಿಗೆ ಕೆಟ್ಟ ಹೆಸರು ತರುವುದು ಸರಿಯಲ್ಲ. ನಾವು ಬಂದಿರುವುದು ಇ–ಹರಾಜು ಸಂಬಂಧಿಸಿದಂತೆ ಮಾತನಾಡಲು. ಹೊಗಳಿಸಿಕೊಳ್ಳಲು ಅಲ್ಲ’ ಎಂದು ರೀಲರುಗಳಾದ ಎ.ಆರ್. ಅಬ್ದುಲ್ ಅಜೀಜ್, ಡಿ.ಎಂ.ಜಗದೀಶ್ವರ್, ಜಿ.ರೆಹಮಾನ್, ಸಾಧಿಕ್ಪಾಷ, ಎ.ರಹಮತ್ತುಲ್ಲ, ರಿಜ್ವಾನ್ ಮುಂತಾದವರು ಅಸಮಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಾಗ, ಸಭೆ ನಡೆಯಲು ಸಹಕರಿಸುವಂತೆ ಅಧಿಕಾರಿಗಳು ರೀಲರುಗಳನ್ನು ಸಮಾಧಾನ ಪಡಿಸಿದ ನಂತರ ಸಭೆ ನಡೆಸಲಾಯಿತು.