ರೇಷ್ಮೆ ಕೃಷಿಯನ್ನು ಅವಲಂಬಿಸಿರುವ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಸದಸ್ಯರು ರೇಷ್ಮೆ ಕೃಷಿ ಆಯುಕ್ತ ಕೆ.ಎಸ್.ಮಂಜುನಾಥ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಈಚೆಗೆ ರೇಷ್ಮೆ ಕೃಷಿ ಆಯುಕ್ತರು ಭೇಟಿ ನೀಡಿದ್ದಾಗ, ರೈತ ಸಂಘದ ಸದಸ್ಯರು ರೇಷ್ಮೆಯನ್ನು ಅವಲಂಬಿತರಾದವರ ಸಮಸ್ಯೆಗಳನ್ನು ವಿವರಿಸಿದರು.
ಒಂದು ಕೆಜಿ ರೇಷ್ಮೆ ಗೂಡನ್ನು ಬೆಳೆಯಲು ೩೫೦ ರೂ ಆಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಒಂದು ಕೇಜಿ ರೇಷ್ಮೆ ಗೂಡಿನ ಬೆಲೆ ೨೫೦ ರಿಂದ ೩೦೦ ರೂಗಳಿಗೆ ಕುಸಿದಿದೆ. ರೇಷ್ಮೆಯನ್ನು ನಂಬಿದ ರೈತರು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ರೈತರಿಗೆ ಬೆಂಬಲ ಬೆಲೆಯನ್ನು ನೀಡಬೇಕು. ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಮಸ್ಯೆಗಳನ್ನು ಬಗೆಹರಿಸಬೇಕು. ಶಿಡ್ಲಘಟ್ಟ ತಾಲ್ಲೂಕಿನ ಕಚ್ಚಾ ರೇಷ್ಮೆಯನ್ನು ಬೇರೆ ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿದೆ. ನಮ್ಮ ತಾಲ್ಲೂಕಿನಲ್ಲಿಯೇ ರೇಷ್ಮೆ ಸೀರೆ ಹಾಗೂ ಬಟ್ಟೆ ತಯಾರಿಸುವ ಮಗ್ಗಗಳ ಕಾರ್ಖಾನೆಗಳನ್ನು ಸ್ಥಾಪಿಸಿದರೆ ಉದ್ಯೋಗ ಸೃಷ್ಟಿಯಾಗುತ್ತದೆ ಮತ್ತು ಜಿಲ್ಲೆಯ ಅಭಿವೃದ್ಧಿಯಾಗುತ್ತದೆ. ರೇಷ್ಮೆ ಕೃಷಿಕರು ಹಾಗೂ ರೀಲರುಗಳ ಸಭೆ ಕರೆದು ಕುಂದುಕೊರತೆಗಳನ್ನು ನಿವಾರಿಸಬೇಕು. ರೇಷ್ಮೆ ಉದ್ದಿಮೆ ಅಭಿವೃದ್ಧಿಯಾಗಲು ಸಹಕರಿಸಬೇಕೆಂದು ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆಈಸ್.ವೆಂಕಟಸ್ವಾಮಿ, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ಬೂದಾಳ ರಾಮಣ್ಣ, ರಾಜಗೋಪಾಲ್, ಮಾರುತಿ, ಮುದ್ದುರಾಜು, ಶಂಕರನಾರಾಯಣ ಹಾಜರಿದ್ದರು.