Home News ರೈತ ಸಂಘದಿಂದ ಜೂನ್ ೧೦ ರಂದು “ಹೆದ್ದಾರಿ ಬಂದ್‌“ ಗೆ ಕರೆ

ರೈತ ಸಂಘದಿಂದ ಜೂನ್ ೧೦ ರಂದು “ಹೆದ್ದಾರಿ ಬಂದ್‌“ ಗೆ ಕರೆ

0

ನಗರದ ಬಸ್ ನಿಲ್ದಾಣದ ಬಳಿಯಿರುವ ರೈತ ಸಂಘದ ಕಚೇರಿಯಲ್ಲಿ ಸೋಮವಾರ ರೈತರ ಸಭೆ ನಡೆಸಿ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದರು.
ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ರೈತ ಸಂಘ ಹಸಿರುಸೇನೆ ವತಿಯಿಂದ ಜೂನ್ ೧೦ ರ ಸೋಮವಾರ ರಾಷ್ಟ್ರೀಯ ಹೆದ್ದಾರಿ-೭ ರ ಚದಲಪುರ ಕ್ರಾಸ್ ಬಳಿ “ಹೆದ್ದಾರಿ ಬಂದ್‌“ ಗೆ ಕರೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಭೂ ಸ್ವಾದೀನ ಕಾಯ್ದೆ ತಂದಿರುವ ತಿದ್ದುಪಡಿಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಬರದಿಂದ ಬಳಲುತ್ತಿರುವ ಬಯಲುಸೀಮೆ ಭಾಗದ ಜನತೆ ಹಾಗೂ ರೈತರು ನಗರಗಳ ಕಡೆ ವಲಸೆ ಹೋಗುತ್ತಿದ್ದರೂ ಜನಪ್ರತಿನಿಧಿಗಳು ಅಭಿವೃದ್ದಿ ಕಾರ್ಯ ಮರೆತು ತಮ್ಮ ಅಧಿಕಾರದ ಕುರ್ಚಿ ಉಳಿಸಿಕೊಳ್ಳಲು ಯತ್ನಿಸುವ ಮೂಲಕ ರಾಜ್ಯದ ರೈತ ಹಾಗೂ ಜನತೆಯನ್ನು ಮರೆತಿದ್ದಾರೆ.
ಇನ್ನು ೨೦೧೪ ರಲ್ಲಿ ಜಾರಿಗೆ ಬಂದ ಭೂಸ್ವಾಧೀನ ಸಂಪೂರ್ಣವಾಗಿ ಸಾರ್ವಜನಿಕ ಉದ್ದೇಶಗಳಿಗೆ ಸೀಮಿತವಾಗಿರಬೇಕು. ನಗರ ಪ್ರದೇಶಕ್ಕೆ ಒಳಪಟ್ಟಿದ್ದರೆ ಮಾರುಕಟ್ಟೆ ಧರದ ಎರಡು ಪಟ್ಟು ನೀಡಬೇಕು. ಸ್ವಾದೀನ ಪಡಿಸಿಕೊಂಡ ಭೂಮಿಯನ್ನು ಐದು ವರ್ಷದೊಳಗೆ ಉದ್ದೇಶಿತ ಯೋಜನೆಗಳಿಗೆ ಬಳಸಿಕೊಳ್ಳಬೇಕು, ಇಲ್ಲವಾದಲ್ಲಿ ರೈತರಿಗೆ ಆ ಭೂಮಿ ವಾಪಸ್ ನೀಡಬೇಕು ಎಂಬ ನಿಯಮವಿದೆಯಾದರೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರ ಈ ಎಲ್ಲಾ ಅಂಶಗಳನ್ನು ಮರೆಯುವ ಮೂಲಕ ರಾಜ್ಯದ ರೈತ ಸಮುದಾಯಕ್ಕೆ ದ್ರೋಹವೆಸಗುತ್ತಿದೆ ಎಂದರು.
ರೈತ ಸಂಘದ ಗೌರವಾಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ ಮಾತನಾಡಿ, ರೈತರ ವಿವಿಧ ಬೇಡಿಕೆಗಳನ್ನು ಪೂರೈಸಬೇಕು ಎಂದು ಒತ್ತಾಯಿಸಿ ಇದೇ ಜೂನ್ ೧೦ ರಂದು ಕರೆ ನೀಡಿರುವ ಹೆದ್ದಾರಿ ಬಂದ್ ನಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಸತ್ಯನಾರಾಯಣ, ಗೌರವಾಧ್ಯಕ್ಷ ಜೆ.ವಿ.ಕೃಷ್ಣಪ್ಪ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಪದಾಧಿಕಾರಿಗಳಾದ ರಾಮಚಂದ್ರಪ್ಪ, ಮುನಿನಂಜಪ್ಪ ಹಾಜರಿದ್ದರು.

error: Content is protected !!