ರೈತರ ಸಾಲ ಮನ್ನಾ ಮಾಡದೆ ರೈತ ವಿರೋಧಿ ಧೋರಣೆ ತೋರುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಧೋರಣೆಯನ್ನು ಬದಲಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತ ಸಂಘದಿಂದ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಎಚ್ಚರಿಕೆ ನೀಡಿದರು.
ನಗರದಲ್ಲಿ ರೈತ ಸಂಘದ ವತಿಯಿಂದ ಗುರುವಾರ ಬೈಕ್ ರ್ಯಾಿಲಿ ನಡೆಸಿ, ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಸಿ ಅವರು ಮಾತನಾಡಿದರು.
ಕಳೆದ ಆರೇಳು ವರ್ಷಗಳಿಂದ ಸತತ ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಅಂತರ್ಜಲ 1500 ರಿಂದ 2000 ಅಡಿಗಳ ಆಳಕ್ಕೆ ಇಳಿದಿದೆ. ನಮ್ಮ ಬಯಲು ಸೀಮೆಯಲ್ಲಿ ಹೈನುಗಾರಿಕೆ, ಹಣ್ಣಿನ ಬೆಳೆಗಳು, ತರಕಾರಿಗಳು ಮತ್ತು ರೇಷ್ಮೆ ಬೆಳೆಯನ್ನು ನಂಬಿದ್ದು, ಕೊಳವೆ ಬಾವಿಗೆ ಹಾಗೂ ಬೆಳೆ ನಿರ್ವಹಣೆಗೆ ರೈತರು ಸಾಕಷ್ಟು ಸಾಲವನ್ನು ಬ್ಯಾಂಕುಗಳಲ್ಲಿ ಮಾಡಿದ್ದಾರೆ. ನೀರಿನ ಅಭಾವದಿಂದ ಈ ಸಾಲಗಳನ್ನು ತೀರಿಸಲಾಗದೆ, ರೈತರು ಕಂಗಾಲಾಗಿದ್ದಾರೆ. ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ತಹಶೀಲ್ದಾರ್ ಅಜಿತ್ಕುಮಾರ್ ರೈ ಅವರಿಗೆ ರೈತರು ಮನವಿಯನ್ನು ಸಲ್ಲಿಸಿದರು.
ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಮಳಮಾಚನಹಳ್ಳಿ ದೇವರಾಜ್, ಕೆ.ವಿ.ವೇಣುಗೋಪಾಲ್, ರಾಮಕೃಷ್ಣಪ್ಪ ಮತ್ತಿತರರು ಹಾಜರಿದ್ದರು.