Home News ವಿದ್ಯಾರ್ಥಿಗಳಿಂದ ಪಿಟಿಷನ್‌ ಹಾಕಿಸುತ್ತೇನೆ

ವಿದ್ಯಾರ್ಥಿಗಳಿಂದ ಪಿಟಿಷನ್‌ ಹಾಕಿಸುತ್ತೇನೆ

0

‘ಮಾನವ ಹಕ್ಕುಗಳ ಆಯೋಗಕ್ಕೆ ವಿದ್ಯಾರ್ಥಿಗಳಿಂದ ಪಿಟಿಷನ್‌ ಹಾಕಿಸುತ್ತೇನೆ. ಅದರ ಪರಿಣಾಮಗಳ ಬಗ್ಗೆ ನಿಮಗೆ ತಿಳಿದಿದೆಯಾ. ನಿಮ್ಮ ಗ್ರಾಮಕ್ಕೆ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಿ’ ಎಂದು ಪರಿಸರ ತಜ್ಞ ಡಾ. ಅ. ನ.ಯಲ್ಲಪ್ಪರೆಡ್ಡಿ ಗುಡುಗಿದರು.
ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಸಿ.ಎಂ.ಸಿ.ಎ., ನಮ್ಮ ಮುತ್ತೂರು ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಜಂಗಮಕೋಟೆ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ಶಾಲೆಯ ಗೋಡೆ ಹಾಗೂ ದಾರಿಯುದ್ದಕ್ಕೂ ಮೂತ್ರ ವಿಸರ್ಜನೆಯಿಂದ ಆಗುತ್ತಿರುವ ತೊಂದರೆಯ ಬಗ್ಗೆ ಜ್ಯೋತಿ ಶಾಲೆಯ ತೇಜಸ್ವಿನಿ ಹೇಳಿದಾಗ, ಅವರು ಗ್ರಾಮ ಪಂಚಾಯಿತಿಯ ಕಾರ್ಯ ವೈಖರಿಯ ಕುರಿತು ಈ ರೀತಿಯಾಗಿ ಹೇಳಿದರು.
ಬೆಂಗಳೂರಿನಲ್ಲಿ ಸಾವಿರಾರು ಅಕ್ರಮ ಮನೆಗಳನ್ನು ತೆರವುಗೊಳಿಸಿದ್ದಾರೆ, ನಿಮಗೆ ನಾಲ್ಕು ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲು ಆಗುತ್ತಿಲ್ಲವೆ. ಮೂರು ತಿಂಗಳಷ್ಟೆ ನಿಮಗೆ ಗಡುವು. ಅಷ್ಟರೊಳಗೆ ಶೌಚಾಲಯವನ್ನು ನಿರ್ಮಾಣ ಮಾಡದಿದ್ದಲ್ಲಿ ವಿದ್ಯಾರ್ಥಿಗಳಿಂದಲೇ ಪಿಟಿಷನ್‌ ಹಾಕಿಸುತ್ತೇನೆ ಎಂದರು.
ಶಾಲೆಗೆ ಬೇಕು ಭದ್ರತೆ: ‘ನಮ್ಮ ಶಾಲೆಯ ಕಾಂಪೋಂಡ್‌ ಒಳಗೆ ಪ್ರತಿ ದಿನ ವಾಲಿಬಾಲ್‌ ಆಡಲು ಕೆಲವಾರು ಯುವಕರು ಬರುತ್ತಾರೆ. ನಾವು ಕಷ್ಟಪಟ್ಟು ಬೆಳೆಸಿದ್ದ ಗಿಡಗಳನ್ನೆಲ್ಲಾ ನಾಶಪಡಿಸಿದ್ದಾರೆ. ಹೊಸದಾಗಿ ನಿರ್ಮಿಸಿರುವ ಶೌಚಾಲಯಗಳ ಟೈಲ್ಸ್‌ ಮುರಿದಿದ್ದಾರೆ. ರಾತ್ರಿಯ ವೇಳೆ ಶಾಲೆಯು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಭಾನುವಾರ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬರುವ ಶಿಕ್ಷಕರಿಗೆ ಗದರಿ ಕಳುಹಿಸುವ ಪರಿಸ್ಥಿತಿಯಿದೆ. ಶಾಲೆಯ ಶಿಕ್ಷಕರೇ ಗೇಟ್‌ ಮಾಡಿಸುತ್ತಿದ್ದಾರೆ. ನಮಗೆ ಭದ್ರತೆ ಬೇಕು’ ಎಂದು ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಶ್ವೇತಾ ಕೇಳಿದರು.

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿನಿ ಶ್ವೇತಾ ಅನೈತಿಕ ಚಟುವಟಿಕೆಗಳಿಂದ ಶಾಲೆಯನ್ನು ರಕ್ಷಿಸಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಹಮತ್‌ಜಾನ್‌ ಅವರಿಗೆ ಮನವಿ ಸಲ್ಲಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿನಿ ಶ್ವೇತಾ ಅನೈತಿಕ ಚಟುವಟಿಕೆಗಳಿಂದ ಶಾಲೆಯನ್ನು ರಕ್ಷಿಸಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಹಮತ್‌ಜಾನ್‌ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೆ.ವೆಂಕಟೇಶ್‌ ಮಾತನಾಡಿ, ಶಾಲೆಯು ಪವಿತ್ರವಾದ ಸ್ಥಳ. ನಮ್ಮ ಗ್ರಾಮದ ಮಕ್ಕಳೇ ಓದುತ್ತಿರುವುದು ಎಂಬ ಭಾವನೆ ಗ್ರಾಮಸ್ಥರಿಗೆ ಇರಬೇಕು. ಗ್ರಾಮ ಪಂಚಾಯಿತಿಯಿಂದ ಕ್ರೀಡೆಗೆ ಬೇರೆ ಸ್ಥಳ ಮಾಡಿಕೊಡಿ. ಶಾಲೆಯ ಕಾಂಪೋಡ್‌ ಒಳಗೆ ಕಿಡಿಗೇಡಿಗಳು ಬರದಂತೆ ಪೊಲೀಸರಿಗೆ ದೂರು ನೀಡಿ ಎಂದು ಹೇಳಿ ಸಭೆಯಲ್ಲಿ ಹಾಜರಿದ್ದ ಎಎಸ್‌ಐ ನಾರಾಯಣಸ್ವಾಮಿ ಅವರಿಗೆ ಕ್ರಮ ಕೈಗೊಳ್ಳುವಂತೆ ಹೇಳಿದರು.
ಬೀದಿನಾಯಿಗಳ ಸಮಸ್ಯೆ: ಬೀದಿ ಬದಿಯ ಕೋಳಿ ಮಾಂಸದ ಅಂಗಡಿಗಳಿಂದಾಗಿ ಬೀದಿ ನಾಯಿಗಳು ಹೆಚ್ಚಾಗಿವೆ. ಇದರಿಂದಾಗಿ ಅಪಘಾತಗಳು ಒಂದೆಡೆಯಾದರೆ, ವಿದ್ಯಾರ್ಥಿಗಳು ನಾಯಿ ಕಡಿತಕ್ಕೊಳಗಾಗುತ್ತಿದ್ದಾರೆ. ಇದಕ್ಕೆ ಪರಿಹಾರ ಕೊಡಿಸಿ ಎಂದೊಬ್ಬ ವಿದ್ಯಾರ್ಥಿ ಹೇಳಿದರು. ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಅಂಬಿಕಾ ಮಾತನಾಡಿ, ಪ್ರತಿದಿನ 10 ರಿಂದ 12 ಮಂದಿ ನಾಯಿ ಕಡಿತಕ್ಕೊಳಗಾಗಿ ಚಿಕಿತ್ಸೆಗೆ ಬರುತ್ತಾರೆ ಎಂದು ಹೌಹಾರುವ ಮಾಹಿತಿ ನೀಡಿದರು. ತಕ್ಷಣವೇ ಪ್ರತಿಕ್ರಿಯಿಸಿದ ಪರಿಸರ ತಜ್ಞ ಡಾ. ಅ. ನ.ಯಲ್ಲಪ್ಪರೆಡ್ಡಿ, ‘ನಾಯಿಗಳ ಕಡಿತದಿಂದ ಈ ಗ್ರಾಮ ವಿಶ್ವ ದಾಖಲೆ ಮಾಡುತ್ತಿದೆ. ನಾಯಿಗಳ ಸಂಖ್ಯೆ ಹೆಚ್ಚಲು ಕಾರಣವೇನು. ತಕ್ಷಣ ಗ್ರಾಮ ಪಂಚಾಯಿತಿಯಿಂದ ಕ್ರಮ ಕೈಗೊಳ್ಳಿ’ ಎಂದರು.
ವಿವಿಧ ಸಮಸ್ಯೆಗಳು: ಜಂಗಮಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯದ ಸಮಸ್ಯೆಯನ್ನು ವಿದ್ಯಾರ್ಥಿ ಜೆ.ಎನ್‌.ಪ್ರಶಾಂತ್‌ಕುಮಾರ್‌ ಪ್ರಸ್ತಾಪಿಸಿದರೆ, ಜಂಗಮಕೋಟೆ ತೋಟಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಕುಂಟೆಯ ತ್ಯಾಜ್ಯದ ಬಗ್ಗೆ ವಿದ್ಯಾರ್ಥಿ ಭರತ್‌ ಬೆಳಕುಚೆಲ್ಲಿದರು. ವಿದ್ಯಾರ್ಥಿ ಮುನಿರಾಜು ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಮುಂದಿನ ಚರಂಡಿಯ ಸ್ವಚ್ಛಗೊಳಿಸದ ಬಗ್ಗೆ ತಿಳಿಸಿದರು. ವಿದ್ಯಾರ್ಥಿ ಆಫ್ರಿರ್‌ ಜಂಗಮಕೋಟೆ ಸರ್ಕಾರಿ ಪ್ರಾಥಮಿಕ ಶಾಲೆಯು ಶಿಥಿಲಾವಸ್ಥೆಯಲ್ಲಿದ್ದು, ಬಸ್‌ ನಿಲ್ದಾಣದ ಬಳಿಯಿರುವುದರಿಂದ ಸ್ಥಳಾಂತರಗೊಳಿಸಲು ಕೋರಿದರು. ಜ್ಯೋತಿ ಶಾಳೆಯ ತೇಜಸ್ವಿಸಿ ರಸ್ತೆ ವೇಗ ನಿಯಂತ್ರಕಗಳನ್ನು ಶಾಲೆಯ ಬಳಿ ಅಳವಡಿಸಬೇಕು ಎಂದು ಕೇಳಿದರು.
ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರವನ್ನು ಕಂಡುಕೊಂಡು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೆ.ವೆಂಕಟೇಶ್‌ ಕ್ರಮ ಕೈಗೊಂಡಿದ್ದು ಸಭೆಯ ವಿಶೇಷವಾಗಿತ್ತು.
ಸಭೆಯನ್ನು ಮುತ್ತುಗದ ಗಿಡವನ್ನು ಶಾಲೆಯ ಆವರಣದಲ್ಲಿ ಗಣ್ಯರು ನೆಡುವ ಮೂಲಕ ಉದ್ಘಾಟಿಸಲಾಯಿತು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕರಿಯಪ್ಪ, ಕಾರ್ಯದರ್ಶಿ ಗಣೇಶ್‌ ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಹಮತ್‌ ಜಾನ್‌, ಉಪಾಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರಾದ ಫಯಾಜ್‌, ಸಯ್ಯದ್‌ ಸನ್ವರ್‌ಪಾಷ, ನೋಡಲ್‌ ಅಧಿಕಾರಿ ದೇವೇಗೌಡ, ಸಿ.ಎಂ.ಸಿ.ಎ ಸಂಸ್ಥೆಯ ಮರಳಪ್ಪ, ವೈದ್ಯೆ ಡಾ.ಅಂಬಿಕಾ, ನಮ್ಮ ಮುತ್ತೂರು ಸಂಸ್ಥೆಯ ಉಷಾಶೆಟ್ಟಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೋಪಾಲ್‌, ಕಾರ್ಮಿಕ ಇಲಾಖೆಯ ರಮೇಶ್‌, ಮುಖ್ಯ ಶಿಕ್ಷಕ ಈರಯ್ಯ, ಶಿಕ್ಷಕರಾದ ಬೈರಾರೆಡ್ಡಿ, ಮಂಜುನಾಥ್‌, ನಾರಾಯಣಸ್ವಾಮಿ, ನಾಗರತ್ನ, ಲತಾ, ಲಾಲಾಸಿಂಗ್‌ರಾಥೋಡ್‌ ಮತ್ತಿತರರು ಹಾಜರಿದ್ದರು.

error: Content is protected !!