Home News ವಿಶ್ವಕರ್ಮರು ಈ ಮಣ್ಣಿನ ದೇಸಿ ವಿಜ್ಞಾನಿಗಳು

ವಿಶ್ವಕರ್ಮರು ಈ ಮಣ್ಣಿನ ದೇಸಿ ವಿಜ್ಞಾನಿಗಳು

0

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಗ್ರೇಡ್ ೨ ತಹಶೀಲ್ದಾರ್ ಹನುಮಂತರಾವ್ ಮಾತನಾಡಿದರು.
ಸಮಾಜದ ಸಮಗ್ರ ಅಭಿವೃದ್ಧಿಗಾಗಿ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾದದ್ದು. ಜೀವನದ ಎಲ್ಲ ಹಂತದಲ್ಲಿಯೂ ಪ್ರತಿಯೊಬ್ಬರಿಗೂ ವಿಶ್ವಕರ್ಮರ ಸಹಕಾರ ಬೇಕೇ ಬೇಕು. ಮನೆ ಕಟ್ಟುವುದು, ಕೃಷಿ ಸೇರಿದಂತೆ ಎಲ್ಲ ರಂಗದಲ್ಲೂ ಅವರ ಅಗತ್ಯವಿದೆ ಎಂದು ಅವರು ತಿಳಿಸಿದರು.
ಮದುವೆ ಸಮಾರಂಭಗಳಲ್ಲಿ ವಧು ವರನಿಗೆ ಆಭರಣ ಹಾಗೂ ರೈತರ ಕಾರ್ಯಗಳಿಗೆ ಬೇಕಾದ ಉಪಕರಣಗಳನ್ನು ಸಿದ್ಧ ಮಾಡಿಕೊಡುವಲ್ಲಿ ಶತಮಾನಗಳಿಂದ ವಿಶ್ವಕರ್ಮ ಸಮುದಾಯದವರು ಶ್ರಮಿಸಿದ್ದಾರೆ ಎಂದರು.
ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಕೆ.ಎನ್.ಜನಾರ್ಧನಮೂರ್ತಿ ಮಾತನಾಡಿ, ಕರಕುಶಲ ಜ್ಞಾನವನ್ನು ಹೊಂದಿರುವ ವಿಶ್ವಕರ್ಮ ಸಮುದಾಯಕ್ಕೆ ಮೂರುವರೆ ಸಾವಿರ ವರ್ಷಗಳ ಇತಿಹಾಸವಿದೆ. ವಿಶ್ವಕರ್ಮರು ಈ ಮಣ್ಣಿನ ದೇಸಿ ವಿಜ್ಞಾನಿಗಳು. 1650 ವರ್ಷಗಳ ಹಿಂದೆ, ಅಂದರೆ ಕ್ರಿ.ಶ.250ರಲ್ಲೇ ಶಿಕಾರಿಪುರದಲ್ಲಿ ದೊರೆತ ಶಾಸನವೊಂದರಲ್ಲಿ ವಿಶ್ವಕರ್ಮರ ಬಗ್ಗೆ ಉಲ್ಲೇಖಿಸಲಾಗಿದೆ ಎಂದರು.
ಈ ಸಮುದಾಯವನ್ನು ಪಂಚಶಾಲಾ ಕೆಲಸಗಾರರೆಂದು ಬಣ್ಣಿಸಲಾಗಿದೆ. ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿರುವ ವಿಶ್ವಕರ್ಮರು ಶ್ರಮ ಸಂಸ್ಕೃತಿ ಹರಿಕಾರರು. ಕರಕುಶಲತೆಯಿಂದ ಕೆಲಸ ಮಾಡುವುದೇ ಒಂದು ಯೋಗ ಎಂದರಿತಿರುವ ವಿಶ್ವಕರ್ಮರು ಈ ದೇಶದ ಆಸ್ತಿ ಆಗಿದ್ದಾರೆ. ನಮ್ಮಲ್ಲಿರುವ ದೇಗುಲಗಳ ವಿನ್ಯಾಸ, ಶೈಲಿ, ದೇವರ ವಿಗ್ರಹಗಳ ವೀಕ್ಷಣೆಗೆಂದೇ ವಿದೇಶಿಯರು ಭಾರತಕ್ಕೆ ಭೇಟಿ ಕೊಡುತ್ತಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಸಮುದಾಯ ಕಾರಣವಾಗಿದೆ. ಆ ಮೂಲಕ ಬೊಕ್ಕಸದ ಸಂಪನ್ಮೂಲ ಸಂಗ್ರಹಕ್ಕೆ ವಿಶ್ವಕರ್ಮರ ಪಾತ್ರ ಪ್ರಮುಖವಾಗಿದೆ ಎಂದರು.
ಪತ್ರಕರ್ತ ರೂಪಸಿ ರಮೇಶ್ ಮಾತನಾಡಿದರು. ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗಿಡಗಳನ್ನು ವಿತರಿಸಲಾಯಿತು.
ಶಿರಸ್ತೆದಾರ್ ಮಂಜುನಾಥ್, ನಗರಸಭೆ ಸದಸ್ಯ ಎಲ್.ಅನಿಲ್ ಕುಮಾರ್, ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಅಮರನಾರಾಯಣಾಚಾರಿ, ಕಾಳಿಕಾಂಭ ಕಮಠೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಮುನಿರತ್ನಾಚಾರಿ, ಈಶ್ವರಾಚಾರಿ ಹಾಜರಿದ್ದರು.