ಭಾರತದ ಇತಿಹಾಸದಲ್ಲಿಯೇ ವಿಶ್ವೇಶ್ವರಯ್ಯ ಅವರಿಗೆ ಹೋಲಿಸುವ ಮತ್ತೊಬ್ಬ ವ್ಯಕ್ತಿ ಸಿಗಲಾರರು. ಸರ್ ಎಂ. ವಿ ಅವರ ಬದುಕು ಮತ್ತು ಸಾಧನೆಯನ್ನು ಜನ ಅರಿತಷ್ಟೂ ನಮ್ಮ ಎಳೆಯ ಪೀಳಿಗೆಯ ಎದುರು ಆದರ್ಶದ ಉದಾಹರಣೆಯೊಂದು ಪ್ರಜ್ವಲಿಸಿ ನಿಲ್ಲುತ್ತದೆ ಎಂದು ಮುಖ್ಯ ಶಿಕ್ಷಕ ಶಿವಶಂಕರ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಂಚಕೋರತನ, ಲಾಭಕೋರತನದ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಮಾಜದಲ್ಲಿ ವಿಶ್ವೇಶ್ವರಯ್ಯ ಅವರ ಪ್ರಾಮಾಣಿಕ ನಿಸ್ವಾರ್ಥ ದುಡಿಮೆ ನಮಗೆ ದಾರಿದೀಪವಾಗಬಲ್ಲದು ಎಂದು ತಿಳಿಸಿದರು.
ವಿಜ್ಞಾನ ಶಿಕ್ಷಕ ದೊಡ್ಡನಾಯ್ಕ ಮಾತನಾಡಿ, ಶಿಕ್ಷಣ, ಔದ್ಯಮಿಕ, ವ್ಯಾಪಾರ, ವಾಣಿಜ್ಯ, ತಾಂತ್ರಿಕ ಶಿಕ್ಷಣ, ನೀರಾವರಿ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಪರ್ಯಾಯ ಹೆಸರು ಸರ್.ಎಂ. ವಿಶ್ವೇಶ್ವರಯ್ಯನವರು. ಒಂದು ನಾಡಿನ ಏಳಿಗೆಗೆ ಏನೆಲ್ಲಾ ಬೇಕೊ ಆ ಎಲ್ಲಾ ದಿಕ್ಕಿನಲ್ಲೂ ಕೆಲಸ ಮಾಡಿ ಒಂದು ನಾಡಿನ ಏಳಿಗೆಗೆ ದಾರಿ ಹಾಕಿಕೊಟ್ಟ ಹರಿಕಾರ ಎಂದು ತಿಳಿಸಿದರು.
ಶಾಲೆಯ ಕನ್ನಡ ಮತ್ತು ವಿಜ್ಞಾನ ಸಂಘದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಡೆಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳಾದ ಪುನಿತ್, ದೇವರಾಜ ಮತ್ತು ಮಾರುತಿ ಮಾತನಾಡಿದರು.