‘ನಮ್ಮ ಮನೆಯಷ್ಟೇ ನಮ್ಮ ಬಡಾವಣೆಯೂ ಸ್ವಚ್ಛವಾಗಿರಬೇಕು‘ ಎಂಬ ಭಾವನೆ ಎಲ್ಲರಲ್ಲೂ ಮೂಡಿದರೆ ಊರು ಸ್ವಚ್ಛವಾಗಿರುತ್ತದೆ ಎಂದು ಗಾಂಧಿನಗರದ ಅಶ್ವತ್ಥ್ ತಿಳಿಸಿದರು.
ನಗರದ ಮಾರುತಿ ನಗರದಲ್ಲಿ ಭಾನುವಾರ ‘ವಿಶ್ವ ವಿವೇಕ ಯುವಕರ ಬಳಗ’ದ ವತಿಯಿಂದ ಹಮ್ಮಿಕೊಂಡಿದ್ದ ಮಾರುತಿ ನಗರ ಮತ್ತು ಗಾಂಧಿನಗರದ ಬೀದಿ ಮತ್ತು ಚರಂಡಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ತಿಂಗಳ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ನಾವು ನಮ್ಮ ಬಳಗದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಚರಂಡಿ ಸ್ವಚ್ಛತೆ, ಬೀದಿಗಳ ಸ್ವಚ್ಛತೆ, ಗಿಡ ನೆಡುವುದು, ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸುವುದು ಹಾಗೂ ಸರ್ಕಾರಿ ಆಸ್ಪತ್ರೆಯ ಬಳಿ ಸೊಳ್ಳೆಗಳನ್ನು ನಾಶ ಪಡಿಸುವ ಫಾಗಿಂಗ್ ಮಾಡಿ, ಆಸ್ಪತ್ರೆಗೆ ಕಸದ ಬುಟ್ಟಿಗಳನ್ನು ನೀಡಲಿದ್ದೇವೆ ಎಂದು ವಿವರಿಸಿದರು.
‘ವಿಶ್ವ ವಿವೇಕ ಯುವಕರ ಬಳಗ’ದ ಸದಸ್ಯರೊಂದಿಗೆ ಸ್ವಚ್ಛತೆಯ ಕಾರ್ಯಕ್ಕೆ, ಗಿಡ ನೆಡುವುದಕ್ಕೆ ಮಕ್ಕಳು, ಸಾರ್ವಜನಿಕರು ಕೈಜೋಡಿಸಿದರು.
ಅರುಣ್, ಮನೋಹರ್, ಮುರಳಿಕುಮಾರ್, ರವಿಕುಮಾರ್, ನವೀನ್, ಗಂಗಾಧರ್, ಶ್ರೀನಿವಾಸ್ ಹಾಜರಿದ್ದರು.