ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರವು ವೇದಿಕೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಾಂತಾ ಬಿ ಜಿಂದ್ರಾಲೆ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆಯ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿನಿಲಯದಲ್ಲಿ ಬುಧವಾರ ಬಾಲವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಯುಕ್ತಾಶ್ರಯದಲ್ಲಿ ಉಚಿತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹತ್ತು ದಿನಗಳ ಕಾಲ ಜೇಡಿ ಮಣ್ಣಿನ ಕಲೆ, ಡ್ರಾಯಿಂಗ್, ಪೈಂಟಿಂಗ್, ಪೇಪರ್ ಕಟ್ಟಿಂಗ್, ಸಂಗೀತ, ನೃತ್ಯ, ನಾಟಕ, ಯೋಗ, ಕರಾಟೆ ಮುಂತಾದ ತರಬೇತಿಯನ್ನು ನೂರು ಮಕ್ಕಳಿಗೆ ನೀಡಲಾಗುವುದು. ಇದು ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯವಾಗಲಿದೆ. ಅವರ ಕಲಿಕೆಯು ಹೆಚ್ಚಲಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಎಂ.ರಾಧ, ನೃತ್ಯ ಶಿಕ್ಷಕಿ ಹರ್ಷಿಯಾ, ಕರಾಟೆ ಶಿಕ್ಷಕರಾದ ಎಸ್.ಮಹಮ್ಮದ್, ನೂರುಲ್ಲ, ಯೋಗ ಶಿಕ್ಷಕಿ ದ್ರಾಕ್ಷಾಯಿಣಿ, ಚಿತ್ರಕಲೆ ಶಿಕ್ಷಕ ಅಬ್ದುಲ್ ಸತ್ತಾರ್, ಸಂಗೀತ ಶಿಕ್ಷಕ ರಾಮಮೂರ್ತಿ ಹಾಜರಿದ್ದರು.