Home News ಶಾರದಾ ಪೂಜೆ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಶಾರದಾ ಪೂಜೆ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

0

ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಶಾರದಾ ಪೂಜೆ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಕವಿ, ಲೇಖಕ ಚಂದ್ರಶೇಖರ ಹಡಪದ್ ಮಾತನಾಡಿದರು.
ವಿದ್ಯಾರ್ಥಿಗಳು ಈಗಿನಿಂದಲೇ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಸದಾ ಜಾಗರೂಕರಾಗಿದ್ದು, ಪ್ರತಿ ಸಂದರ್ಭದಲ್ಲೂ ಒಳ್ಳೆಯ ವಿಚಾರಗಳನ್ನು ಕಲಿತು ಸತ್ಪ್ರಜೆಗಳಾಗಿ ಪರೀಕ್ಷೆಯನ್ನು ಒಂದು ಹಬ್ಬದಂತೆ ಸಂಭ್ರಮಿಸಿ, ಆತಂಕವನ್ನು ಹೊಡೆದೋಡಿಸಿ ಎಂದು ಅವರು ತಿಳಿಸಿದರು.
ಪರೀಕ್ಷೆಯೇ ಬದುಕಲ್ಲ, ಬದುಕಿನ ಒಂದು ಭಾಗವಷ್ಟೆ. ನಿಮ್ಮ ಬದುಕು ಹಿರಿದಾಗಿದೆ. ಈ ರೀತಿಯ ಪರೀಕ್ಷೆಗಳನ್ನು ಹೆಜ್ಜೆಗೊಂದರಂತೆ ಎದುರಿಸಬೇಕಾಗುತ್ತದೆ. ಸೂಕ್ತ ತಯಾರಿ, ಶ್ರದ್ಧೆಯಿಂದ ಓದುವುದು, ಅರ್ಥೈಸಿಕೊಳ್ಳುವುದರಿಂದ ಬದುಕು ಬಂಗಾರವಾಗುತ್ತದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಸ್.ಶಿವಶಂಕರ್ ಮಾತನಾಡಿ, ನಮ್ಮ ಶಾಲೆಯಲ್ಲಿ ಉತ್ತಮ ವಿದ್ಯೆ ಮತ್ತು ಸಂಸ್ಕಾರವನ್ನು ಕಲಿತಿರುವಿರಿ. ಇದನ್ನು ಮುಂದುವರೆಸಿಕೊಂಡು ಹೋಗಿ. ನೀವು ಮುಂದಿನ ದಿನಗಳಲ್ಲಿ ಸಾಧನೆ ಮಾಡಿದಷ್ಟೂ ನೀವು ಓದಿದ ಶಾಲೆಗೆ ಕೀರ್ತಿ ಬರುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ವರ್ಷದ ಶಾಲೆಯ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಆರ್.ಮಹೇಶ್ ಎಂಬ ವಿದ್ಯಾರ್ಥಿಗೆ ನೀಡಿ ಗೌರವಿಸಲಾಯಿತು. ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಹಾಗೂ ಇಕೋ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಚಟುವಟಿಕೆಗಳಲ್ಲಿ ಬಹುಮಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜುನಾಥ್, ಶಿಕ್ಷಕರಾದ ನವೀನ್ ಕುಮಾರ್, ಶ್ರೀನಿವಾಸ್, ಎಂ.ಶಿವಕುಮಾರ್, ರಾಮಮೂರ್ತಿ, ದೊಡ್ಡನಾಯ್ಕ, ಸವಿತಾ ಹಾಜರಿದ್ದರು.

error: Content is protected !!