ನಗರದ ಚಿಂತಾಮಣಿ ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್, ದಿಬ್ಬೂರಹಳ್ಳಿ ರಸ್ತೆಯ ಎಬೆನೆಜರ್ ಮಾರ್ತೋಮ ಚರ್ಚ್, ನೆಲ್ಲೀಮರದಹಳ್ಳಿಯ ಇಮ್ಮಾನುವೇಲ್ ಚರ್ಚ್ ಹಾಗೂ ತಾಲ್ಲೂಕಿನ ವಿವಿದೆಡೆಗಳಲ್ಲಿರುವ ಚರ್ಚ್ ಗಳನ್ನು ಮಂಗಳವಾರ ಕ್ರಿಸ್ ಮಸ್ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಮೇಣದ ಬತ್ತಿಗಳನ್ನು ಬೆಳಗುವ ಮೂಲಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಜಾತಿ ಬೇಧವಿಲ್ಲದೆ ನೂರಾರು ಮಂದಿ ವಿವಿಧ ಚರ್ಚ್ ಗಳಿಗೆ ಭೇಟಿ ನೀಡಿ ಮೇಣದ ಬತ್ತಿಗಳನ್ನು ಬೆಳಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಚರ್ಚ್ ಗಳಲ್ಲಿ ಕೇಕನ್ನು ಹಂಚಿದರು.
“ವರ್ಷಕ್ಕೊಮ್ಮೆ ಬರುವ ಏಸುಕ್ರಿಸ್ತನ ಜಯಂತಿಯನ್ನು ಸಡಗರದಿಂದ, ಭಕ್ತಿ ಭಾವದಿಂದ ಕ್ರಿಶ್ಚಿಯನ್ನರು ಆಚರಿಸುತ್ತಾರೆ. ಕ್ರೈಸ್ತರಿಗೆ ಪವಿತ್ರ ಹಬ್ಬವಾಗಿರುವ ಕ್ರಿಸ್ ಮಸ್ ಅಥವಾ ಕ್ರಿಸ್ತ ಜಯಂತಿಯನ್ನು ಪ್ರತಿವರ್ಷ ವಿಶ್ವದಾದ್ಯಂತ ಸಂಭ್ರಮ ಸಡಗರಗಳಿಂದ ಆಚರಣೆ ಮಾಡಲಾಗುತ್ತದೆ. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ತಾಲ್ಲೂಕಿನ ಎಲ್ಲಾ ಚರ್ಚುಗಳಲ್ಲಿ ವಿವಿಧ ರೀತಿಗಳಲ್ಲಿ ಆಚರಣೆ ಮಾಡುತ್ತಾ ಬಂದಿದ್ದು, ಏಸುವಿನ ಸಂದೇಶವನ್ನು ಜನರಿಗೆ ತಿಳಿಸಲಾಗುತ್ತಿದೆ.
ಕ್ರಿಸ್ ಮಸ್ ಸಮಯದಲ್ಲಿ ಕ್ರೈಸ್ತ ಕುಟುಂಬಗಳ ಮೇಲೆ ನಕ್ಷತ್ರಗಳನ್ನು ಕಟ್ಟುವುದು ವಾಡಿಕೆ. ಕ್ರೈಸ್ತರು ನಮಗಾಗಿ ಜನಿಸಿದ ರಕ್ಷಕನು ಏಸು ಎಂಬ ನಂಬಿಕೆಯಿಂದ ಕ್ರಿಸ್ ಮಸ್ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ತಮ್ಮ ಮನೆಗಳನ್ನು ವಿವಿಧ ಬಣ್ಣದ ಕಾಗದಗಳಿಂದ ಅಲಂಕಾರ ಮಾಡಿ, ಸ್ನೇಹಿತರು, ಬಂಧುಗಳು, ಸೇರಿದಂತೆ ಎಲ್ಲರೊಂದಿಗೂ ಶುಭಾಶಯಗಳನ್ನು ಹಂಚಿಕೊಂಡು ಎಲ್ಲರ ಒಳಿತಾಗಿ ಪ್ರಾರ್ಥನೆ ಮಾಡುವುದು ರೂಢಿಯಲ್ಲಿದೆ. ಪ್ರತಿಯೊಂದು ಚರ್ಚ್ ನಲ್ಲಿಯೂ ಏಸುವಿನ ಜನ್ಮವೃತ್ತಾಂತವನ್ನು ಪ್ರತಿನಿಧಿಸುವಂತೆ ಪ್ರತಿಕೃತಿಗಳ ಮೂಲಕ ಅಲಂಕಾರವನ್ನು ಮಾಡಿರುತ್ತಾರೆ’ ಎಂದು ಪೂಜೆ ಸಲ್ಲಿಸಲು ಬಂದಿದ್ದ ಜೋಸೆಫ್ ತಿಳಿಸಿದರು.