ನಗರ ಹಾಗೂ ತಾಲ್ಲೂಕಿನ ಜನರ ಬಹು ದಿನಗಳ ಬೇಡಿಕೆಯ ಮೇರೆಗೆ ಶಿಡ್ಲಘಟ್ಟದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಕೆಎಸ್ಆರ್ಟಿಸಿ ಬಸ್ಸನ್ನು ಪ್ರತಿದಿನ ಮಧ್ಯಾಹ್ನ ಮೂರು ಗಂಟೆಗೆ ಹೊರಡುವಂತೆ ಶುಕ್ರವಾರ ಚಾಲನೆ ನೀಡಲಾಯಿತು.
ಶಿಡ್ಲಘಟ್ಟದಿಂದ ಹೊರಟು ವಿಜಯಪುರ, ದೇವನಹಳ್ಳಿ, ಬೆಂಗಳೂರು, ಮದ್ದೂರು, ಮಳವಳ್ಳಿ, ಕೊಳ್ಳೇಗಾಲ ಮಾರ್ಗವಾಗಿ ಸಾಗಿ ಮಲೆಮಹದೇಶ್ವರ ಬೆಟ್ಟವನ್ನು ಸಂಜೆ 9.30 ಗಂಟೆಗೆ ಬಸ್ ಮಲೆಮಹದೇಶ್ವರ ಬೆಟ್ಟ ತಲುಪುತ್ತದೆ.
‘ನಮ್ಮ ಭಾಗದಿಂದ ಬಹಳಷ್ಟು ಜನರು ಮಹದೇಶ್ವರ ಬೆಟ್ಟಕ್ಕೆ ಹೋಗುವುದು ವಾಡಿಕೆ. ಈ ನೂತನ ಕೆಎಸ್ಆರ್ಟಿಸಿ ಬಸ್ ಸಂಚಾರದಿಂದ ಭಕ್ತರು, ರೈತರು ಹಾಗೂ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ರಾತ್ರಿ ಬೆಟ್ಟವನ್ನು ತಲುಪಿ ದೇವರ ಪೂಜೆಯಲ್ಲಿ ಪಾಲ್ಗೊಳ್ಳಬಹುದು. ಅಲ್ಲಿಯೇ ತಂಗಿದ್ದು ಮುಂಜಾನೆಯ ಪೂಜೆಯಲ್ಲೂ ಪಾಲ್ಗೊಂಡು ಅಲ್ಲಿಂದ ಬೆಳಿಗ್ಗೆ 7.30ಕ್ಕೆ ಹೊರಡುವ ಅದೇ ಬಸ್ನ ಮೂಲಕ ಬರಬಹುದಾಗಿದೆ. ಚಿಕ್ಕಬಳ್ಳಾಪುರ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಅಂತೋಣಿ ಜಾರ್ಜ್, ವಿಭಾಗೀಯ ಸಂಚಾಲನಾಧಿಕಾರಿ ಶ್ರೀಧರ್ ಹಾಗೂ ಚಿಂತಾಮಣಿ ಘಟಕದ ವ್ಯವಸ್ಥಾಪಕ ಶಂಕರ್ ಅವರು ಜನರ ಅನುಕೂಲಕ್ಕಾಗಿ ಬಸ್ ಸೌಲಭ್ಯ ಒದಗಿಸಿದ್ದಾರೆ’ ಎಂದು ವಾಯು ಸೇನೆಯ ನಿವೃತ್ತ ಅಧಿಕಾರಿ ಎಸ್.ವಿ.ಅಯ್ಯರ್ ತಿಳಿಸಿದರು.
ಚಿಕ್ಕಬಳ್ಳಾಪುರ ವಿಭಾಗೀಯ ಸಂಚಾರ ಸಹಾಯಕ ಮಜೀದ್, ಬಸ್ ನಿಲ್ದಾಣದ ಅಧಿಕಾರಿ ಮುನಿಯಪ್ಪ, ನಿಲ್ದಾಣದ ನಿರ್ವಾಹಕ ದಸ್ತಗೀರ್, ಕನಕ ನಗರದ ನಾರಾಯಣಸ್ವಾಮಿ, ವೆಂಕಟರಮಣಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.