Home News ಶಿಕ್ಷಕರು ಮಕ್ಕಳಿಗೆ ಸರಳವಾಗಿ ಬೋಧಿಸಲು ಕಾರ್ಯಪ್ರವೃತ್ತರಾಗಬೇಕು

ಶಿಕ್ಷಕರು ಮಕ್ಕಳಿಗೆ ಸರಳವಾಗಿ ಬೋಧಿಸಲು ಕಾರ್ಯಪ್ರವೃತ್ತರಾಗಬೇಕು

0

ಎಸ್ಎಸ್ಎಲ್ಸಿ ಹೊಸ ಪಠ್ಯಕ್ರಮವನ್ನು ಜಾರಿಗೊಳಿಸಿದ್ದು ಶಿಕ್ಷಕರು ಮಕ್ಕಳಿಗೆ ಸರಳವಾಗಿ ಬೋಧಿಸಲು ಕಾರ್ಯಪ್ರವೃತ್ತರಾಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪ್ರೌಢಶಾಲಾ ಶಿಕ್ಷಕರ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿ ನೀಡುವ ಉದ್ದೇಶದಿಂದ ಶಿಕ್ಷಕರಿಗೆ ತರಬೇತಿಯನ್ನು ಹಮ್ಮಿಕೊಂಡಿದ್ದು, ಶಿಕ್ಷಕರು ತಾವು ಪಡೆದ ಜ್ಞಾನವನ್ನು ಮಕ್ಕಳಿಗೆ ತಲುಪಿಸಬೇಕು. ಹೆಚ್ಚು ಬೋಧನೋಪಕರಣಗಳನ್ನು ಬಳಸಿ ಕ್ರಿಯಾಶೀಲವಾಗಿ ಮಕ್ಕಳಿಗೆ ಪಾಠ ಮಾಡಬೇಕೆಂದು ಹೇಳಿದರು.
ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆ ಪ್ರಭಾರಿ ಮುಖ್ಯಶಿಕ್ಷಕ ಬೈರಾರೆಡ್ಡಿ ಮಾತನಾಡಿ, ಎಸ್ಎಸ್ಎಲ್ಸಿ ಫಲಿತಾಂಶ ಉತ್ತಮಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾರ್ಯಾಗಾರದಲ್ಲಿ ಒತ್ತು ನೀಡಲಾಗುವುದು. ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳ ಬಳಿ ಗೊಂದಲಗಳನ್ನು ಪರಿಹರಿಸಿಕೊಳ್ಳಬೇಕು. ಶಿಕ್ಷಕರು ತರಗತಿಯಲ್ಲಿ ಎದುರಿಸಬಹುದಾದ ಸವಾಲುಗಳನ್ನು ನಿವಾರಿಸಲು ಏರ್ಪಡಿಸಿರುವ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.
ಶಿಕ್ಷಣ ಸಂಯೋಜಕ ರಾಮಣ್ಣ, ಸಂಪನ್ಮೂಲ ವ್ಯಕ್ತಿಗಳಾದ ಉಪನ್ಯಾಸಕರಾದ ಹನುಮಂತರಾಯಪ್ಪ, ದೇವರಾಜ್, ಶಿಕ್ಷಕರಾದ ಎಲ್.ವಿ.ವೆಂಕಟರೆಡ್ಡಿ, ಬಾಬು ಮತ್ತಿತರರು ಹಾಜರಿದ್ದರು.